ಗುರುಕಂಬಳ: ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ
ಕೈಕಂಬ, ಸೆ.24: ಇಲ್ಲಿನ ಗುರುಕಂಬಳ ಎಕೆಯು ಅನುದಾನಿತ ಪ್ರೌಢಶಾಲೆಯ 34 ವಿದ್ಯಾರ್ಥಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಸೈಕಲ್ ಸೋಮವಾರ ವಿತರಿಸಿದರು.
ಬಳಿಕ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಯಲ್ಲಿ ಜಾತಿ, ಧರ್ಮ, ರಾಜಕೀಯ ಸುಳಿಯಬಾರದು. ಈ ಶಾಲೆಯ ಕುಂದುಕೊರತೆಗಳಿಗೆ ತಾನು ಮುಕ್ತ ಮನಸ್ಸಿಂದ ಕೆಲಸ ಮಾಡುವೆ. ಮುಖ್ಯವಾಗಿ, ಶಾಲೆಯಲ್ಲಿರುವ ಶಿಕ್ಷಕರ ಕೊರತೆ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಶಿಕ್ಷಕರ ನೇಮಕಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ದಕ ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯುಪಿ ಇಬ್ರಾಹೀಂ ಮಾತನಾಡಿ ಗುರುಕಂಬಳ, ಮೊಗರು ಶಾಲೆಯ ಶಿಕ್ಷಕರ ಕೊರತೆಯ ನೇರ ಪರಿಣಾಮ ಮಕ್ಕಳ ಮೇಲೆ ಬೀರಿದೆ. ಸರಕಾರಿ ಮಟ್ಟದಲ್ಲಿ ಹೆಚ್ಚುವರಿ ಶಿಕ್ಷಕರ ನೇಮಕಾತಿಗೆ ಶಾಸಕರು ಆಸಕ್ತಿ ವಹಿಸಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಲಿಲ್ಲಿ ಕ್ರಾಸ್ತಾ ಸ್ವಾಗತಿಸಿದರು. ವೇದಿಕೆಯಲ್ಲಿ ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಜಾಕಿರ್, ತಾಪಂ ಸದಸ್ಯ ಸುನಿಲ್ ಜಿ, ಕೆಡಿಪಿ ಸದಸ್ಯ ಗಣೇಶ್ ಪೂಜಾರಿ, ಗ್ರಾಪಂ ಸದಸ್ಯರಾದ ಎಸ್ಎಂ ಸಮೀರ್, ದುಲ್ಸಿನ್ ಕ್ರಾಸ್ತಾ, ನೋಣಯ್ಯ ಪೂಜಾರಿ ಹಾಗೂ ಸೋಹನ್ ಅಥಿಕಾರಿ, ಎಂಎಸ್ ಹಮೀದ್, ಶಾಲಾ ಸಂಚಾಲಕ ಅಬ್ದುಲ್ ಶಕೂರ್, ಪಿಟಿಎ ಅಧ್ಯಕ್ಷ ಅಬ್ದುಲ್ ರಝಾಕ್, ಗುರುಪುರ ಗ್ರಾಪಂ ಸದಸ್ಯ ರಾಜೇಶ್ ಸುವರ್ಣ ಉಪಸ್ಥಿತರಿದ್ದರು. ಶಿಕ್ಷಕ ಸ್ವಾದಿಕ್ ಕಾರ್ಯಕ್ರಮ ನಿರೂಪಿಸಿದರು.
...