ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಫುಟ್ ಬಾಲ್ ಪಂದ್ಯಾಟ: ಬ್ರಹ್ಮಾವರ ಕ್ರಾಸ್ ಲ್ಯಾಂಡ್ ತಂಡ ಪ್ರಥಮ,
ಆಳ್ವಾಸ್ ದ್ವಿತೀಯ
ಮೂಡುಬಿದಿರೆ : ಇಲ್ಲಿನ ಶ್ರೀ ಮಹಾವೀರ ಕಾಲೇಜು ಮತ್ತು ಸಮಾಜ ಮಂದಿರ ಸಭಾದ ಸಂಯುಕ್ತ ಆಶ್ರಯದಲ್ಲಿ ಜಿ.ವಿ.ಪೈ ಸ್ಟೇಡಿಯಂನಲ್ಲಿ 2 ದಿನ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಉಡುಪಿ ವಲಯ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜಿನ ತಂಡವು ಪ್ರಥಮ ಮತ್ತು ಮೂಡುಬಿದಿರೆಯ ಆಳ್ವಾಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ತೃತೀಯ ಮತ್ತು ಐಕಳ ಪೊಂಪೈ ಕಾಲೇಜಿನ ತಂಡವು ಚತುರ್ಥ ಸ್ಥಾನವನ್ನು ಗಳಿಸಿಕೊಂಡಿದೆ. ಆಟದಲ್ಲಿ ಕ್ರಾಸ್ ಲ್ಯಾಂಡ್ ತಂಡದ ವಿಕ್ಕಿ ಉತ್ತಮ ಹಿಡಿತಗಾರ ಮತ್ತು ಗ್ಲ್ಯಾಡ್ಸನ್ ಉತ್ತಮ ಗೋಲ್ಕೀಪರ್ ಗಳಾಗಿ ಹೊರಹೊಮ್ಮಿದ್ದಾರೆ.
ಮಂಗಳವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಬಹುಮಾನಗಳನ್ನು ವಿತರಿಸಿ ಮಾತನಾಡಿ ಫುಟ್ ಬಾಲ್ ಸಾಮರ್ಥ್ಯವನ್ನು ವ್ಯಕ್ತಪಡಿಸುವ ಆಟ. ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಉದ್ಯಮಿ ಅಬುಲ್ ಅಲಾ ಪುತ್ತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಕೊಳ್ಳಲು ಮಾದಕ ದ್ರವ್ಯಗಳಿಗೆ ಮೊರೆ ಹೋಗದಿರಿ. ಮಾದಕ ದ್ರವ್ಯ ಸೇವಿಸಿದರೆ ನಿಮಗೆ ಒಂದು ಸಲ ಶಕ್ತಿ ಹೆಚ್ಚಬಹುದು ಆದರೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ ಎಂದು ಎಚ್ಚರಿಸಿದರು.
ಚೌಟರ ಅರಮನೆಯ ಕುಲದೀಪ ಎಂ, ಸಂಪತ್ ಸಾಮ್ರಾಜ್ಯ ಪುರಸಭಾ ಸದಸ್ಯರಾದ ಸುರೇಶ್ ಪ್ರಭು, ಉದ್ಯಮಿ ಮಹೇಂದ್ರ ವರ್ಮ ಜೈನ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನೇಮಿರಾಜ್ ಹೆಗ್ಡೆ, ಎಂ.ಕೆ.ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರೊ.ಹರೀಶ್, ಎನ್ಸಿಸಿ ಆಫೀಸರ್ ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ/ಅಜಾದ್ ಅಹಮ್ಮದ್ ಸ್ವಾಗತಿಸಿದರು. ರಾಷ್ಟ್ರೀಯ ತೀರ್ಪುಗಾರರಾದ ಬಿಜು ಜಾಕಬ್ ಕೆ, ಮೋಹನ್ ಕುಮಾರ್, ಪ್ರವೀಣ್ ಮಸ್ಕರೇನಸ್, ಮೋಹನ್ ಕುಮಾರ್ ಪ್ರಖ್ಯಾತ್ ಮತ್ತು ಮಹಮ್ಮದ್ ಮುಫೀದ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ನಾಯಕ ಶ್ರೀರಾಜ್ ಎಸ್. ಸನಿಲ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ರಾಜ್ ಪ್ರಸಾದ್ ವಂದಿಸಿದರು.