ಎಂಆರ್ಪಿಎಲ್ ಉದ್ಯೋಗದಲ್ಲಿ ದ.ಕ. ಜಿಲ್ಲೆಗೆ ಆದ್ಯತೆ ನೀಡಲು ಆಗ್ರಹ: ಡಿವೈಎಫ್ಐಯಿಂದ ಸಿಎಂಗೆ ಮನವಿ
ಬಂಟ್ವಾಳ, ಅ.23: ಪ್ರಸಕ್ತ ಎಂಆರ್ಪಿಎಲ್ನ ನೇಮಕಾತಿಯ 233 ಉದ್ಯೋಗಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಶೇ.80 ಸ್ಥಾನಗಳನ್ನು ಮೀಸಲಿಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ಬಂಟ್ವಾಳ ತಾಲೂಕು ಸಮಿತಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಬಂಟ್ವಾಳ ತಹಶೀಲ್ದಾರ್ ಮೂಲಕ ಸಲ್ಲಿಸಲಾದ ಮನವಿಯಲ್ಲಿ, ಅವಿಭಜಿತ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಉದ್ಯಮ, ಕೈಗಾರಿಕೆಗಳೆಲ್ಲವೂ ಸ್ಥಳೀಯರಿಗೆ ಕನಿಷ್ಠ 80 ಶೇ. ಉದ್ಯೋಗಗಳನ್ನು ಮೀಸಲಿಡುವುದು ಕಡಾಯಗೊಳ್ಳಬೇಕು. ಎಂಆರ್ಪಿಎಲ್ ಮಾತೃ ಸಂಸ್ಥೆಯಾದ ಒಎನ್ಜಿಸಿಯ ತ್ರಿಪುರಾ, ಚೆನ್ನೈ, ಮಹಾರಾಷ್ಟ್ರ ಘಟಕಗಳು ನೇಮಕಾತಿ ಪ್ರಕಟನೆಯಲ್ಲಿ ಆಯಾಯ ರಾಜ್ಯಗಳ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶವನ್ನು ಕಡ್ಡಾಯಗೊಳಿಸಿದ್ದಾರೆ. ಆದರೆ ಎಂಆರ್ಪಿಎಲ್ ಕುಂಟು ನೆಪಗಳನ್ನು ಮುಂದಿಟ್ಟು ಸ್ಥಳೀಯರಿಗೆ ಅವಕಾಶ ನಿರಾಕರಿಸುತ್ತಿದೆ. ಅದರಲ್ಲೂ ಗಲ್ಫ್ ರಾಷ್ಟ್ರಗಳು, ಮುಂಬೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದ ಕರಾವಳಿಯ ಯುವಜನರು ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗೂ ಅಲ್ಲೂ ಉದ್ಯೋಗ ಕಳೆದುಕೊಂಡು ಊರಿಗೆ ವಾಪಸಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಉದ್ಯೋಗಾವಕಾಶಗಳಲ್ಲಿ ದೊಡ್ಡ ಪಾಲನ್ನು ಸ್ಥಳೀಯರಿಗೆ ಮೀಸಲಿಡುವುದು ನ್ಯಾಯಯುತ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಡಿವೈಎಫ್ಐ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ಮುಖಂಡರಾದ ದೇವದಾಸ್ ಕುಲಾಲ್, ಸಾದಿಕ್ ಬಂಟ್ವಾಳ, ಶೌಕತ್ ಅಲಿ ಖಾನ್, ಲೋಲಾಕ್ಷಿ ಬಂಟ್ವಾಳ, ಸೇಸಪ್ಪ ಅಮೀನ್, ಅಶ್ರಫ್ ಸಜಿಪ, ಹುಸೈನ್ ನವಗ್ರಾಮ, ಸುಹೈಲ್ ಮತ್ತಿತರರು ಉಪಸ್ಥಿತರಿದ್ದರು