ಬ್ಯಾರಿ ಭಾಷೆಯಲ್ಲಿ ಚುನಾವಣಾ ಮನವಿ ಪತ್ರ!
ಮಂಗಳೂರು, ನ.9: ಮಂಗಳೂರು ಮಹಾನಗರ ಪಾಲಿಕೆಗೆ ನ.12ರಂದು ನಡೆಯುವ ಚುನಾವಣೆಯಲ್ಲಿ ಪಣಂಬೂರು 11ನೆ ವಾರ್ಡ್ನಿಂದ ಸ್ಪರ್ಧಿಸುತ್ತಿರುವ ಸಿಪಿಎಂ ಅಭ್ಯರ್ಥಿ ಸುನೀತಾ ಕೃಷ್ಣಾ ಪರ ಬ್ಯಾರಿ ಭಾಷೆಯಲ್ಲಿ ಮನವಿ ಪತ್ರ ತಯಾರಿಸಿ ಹಂಚಲಾಗುತ್ತಿದೆ. ಅಷ್ಟೇ ಅಲ್ಲ, ಮತಯಾಚನೆ, ಭಾಷಣ, ಘೋಷಣೆ ಇತ್ಯಾದಿಯೂ ಬ್ಯಾರಿ ಭಾಷೆಯಲ್ಲೇ ನಡೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಇಮ್ತಿಯಾಝ್ ಬಿ.ಕೆ. ಈ ವಾರ್ಡ್ನಲ್ಲಿ 2,500ಕ್ಕೂ ಅಧಿಕ ಬ್ಯಾರಿ ಮುಸ್ಲಿಮ್ ಮತದಾರರಿದ್ದಾರೆ. ಸಾಮಾನ್ಯವಾಗಿ ಕನ್ನಡ, ತುಳುವಿನಲ್ಲಿ ಭಾಷಣ, ಮತಯಾಚನೆ ನಡೆಯುತ್ತಿದ್ದರೂ ಬ್ಯಾರಿ ಸಮುದಾಯದ ಹಿರಿಯರಿಗೆ ವಾಸ್ತವ ತಿಳಿಸಲು ಭಾಷೆಯ ತೊಡಕು ಉಂಟಾಗುತ್ತಿದೆ. ಹಾಗಾಗಿ ನಾವು ಬ್ಯಾರಿ ಭಾಷೆಯಲ್ಲೇ ಪ್ರಚಾರ ಆರಂಭಿಸಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ. ಇದೀಗ ಮತಯಾಚನೆಗೆ ಸಂಬಂಧಿಸಿದ ಕರಪತ್ರವೂ ಬ್ಯಾರಿ ಭಾಷೆಯಲ್ಲೇ ಮುದ್ರಿಸಿ ಹಂಚಲಾಗಿದೆ. ಬಹುಷಃ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಇದು ಪ್ರಥಮ ಪ್ರಯೋಗ ಎನ್ನಬಹುದು ಎಂದಿದ್ದಾರೆ.
Next Story