ಹೆದ್ದಾರಿ ಹೊಂಡಗಳೆದುರು ಸೆಲ್ಫಿ!
ಮೊಗ್ರಾಲ್ನಲ್ಲಿ ನಾಗರಿಕರಿಂದ ವಿನೂತನ ಪ್ರತಿಭಟನೆ
ಮಂಜೇಶ್ವರ, ನ.11: ತಲಪಾಡಿ- ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಹೊಂಡ ಗುಂಡಿಗಳಿಂದ ಕೂಡಿದ್ದು ದಿನದಿಂದ ದಿನಕ್ಕೆ ಕೆಟ್ಟು ಹೋಗುತ್ತಿ ರುವುದನ್ನು ಸಹಿಸದ ಪ್ರಯಾಣಿಕರು ಮೊಗ್ರಾಲ್ನಲ್ಲಿ ಬೀದಿಗಿಳಿದು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರಕಾರದ ಆಡಳಿತ ಮತ್ತು ವಿಪಕ್ಷಗಳು, ಚುನಾಯಿತ ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ರಸ್ತೆ ದುರವಸ್ಥೆಯನ್ನು ಕಡೆಗಣಿಸಿರುವುದಾಗಿ ಆರೋಪಿಸಿದ ಸಾರ್ವಜನಿಕರು ಹೆದ್ದಾರಿ ಕ್ರಿಯಾ ಸಮಿತಿ ಸಂಘಟನೆಯ ಮೂಲಕ ಮೊಗ್ರಾಲ್ ಬಳಿಯ ಕೊಪ್ಪರ ಬಜಾರಿನಲ್ಲಿ ಇತ್ತೀಚೆಗೆ ರಸ್ತೆಯಲ್ಲಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಇದು ಕೇವಲ ಸೂಚನೆ ಮಾತ್ರವಾಗಿದ್ದು, ಮುಂದೆ ಮೊಗ್ರಾಲಿನಲ್ಲಿ ಹೆದ್ದಾರಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರಸ್ತೆ ಕ್ರಿಯಾ ಸಮಿತಿ ಎಚ್ಚರಿಸಿತು.
ಪ್ರತಿಭಟನೆಯಲ್ಲಿ ರಸ್ತೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಇಕ್ಬಾಲ್, ಪದಾಧಿಕಾರಿಗಳಾದ ಅಬ್ದುಲ್ಲತೀಫ್ ಕುಂಬಳೆ, ಮಾಹಿನ್ ಕುನ್ನಿಲ್, ಮೂಸಾ ಮೊಗ್ರಾಲ್, ಮುಹಮ್ಮದ್ ಸ್ಮಾರ್ಟ್, ಉಮರ್ ಪಡಲಡ್ಕ, ಅಶ್ರಫ್ ಬಾಯಾರ್, ರಾಮಕೃಷ್ಣ ಕುಂಬಳೆ, ಮುಹಮ್ಮದ್ ಕೈಕಂಬ, ಹಬೀಬ್ ಕೋಟ, ಮುಹಮ್ಮದ್ ಸೀಗಂದಡಿ, ಹಮೀದ್ ಕಾವಿಲ್, ಬಿ.ಎ.ಮುಹಮ್ಮದ್ , ಸಿದ್ದಿಕ್, ರಹ್ಮಾನ್, ರಿಯಾಝ್ ಮೊಗ್ರಾಲ್, ವಿಜಯ ಕುಮಾರ್, ಮನ್ಸೂರ್, ಅನ್ಸಾರ್, ಇಸ್ಮಾಯೀಲ್ ಮೂಸಾ, ಎಲ್. ಟಿ. ಮನಾಫ್, ಅನ್ವರ್ ಮೊಗ್ರಾಲ್, ಅಬ್ದುಲ್ಲ ಮೊಗ್ರಾಲ್, ಬಶೀರ್ ಕುಂಬಳೆ, ಆರಿಫ್, ಇಬ್ರಾಹೀಂ ಕೊಡ್ಯಮ್ಮೆ ಮತ್ತು ಮಮ್ಮುಟ್ಟಿ ಪ್ರತಿಭಟನೆಗೆ ನೇತೃತ್ವ ನೀಡಿದರು.
ರಸ್ತೆಯಿಂದ ಜಾಲತಾಣಕ್ಕೆ
ಹೆದ್ದಾರಿಯಲ್ಲಿ ಸೃಷ್ಟಿಯಾದ ಹೊಂಡ ಗಳನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆಲ್ಫಿ ಮೂಲಕ ಚಿತ್ರೀಕರಿಸಿ ಸಾರ್ವಜನಿಕರಿಗೆ ಇದನ್ನು ಜಾಲ ತಾಣದ ಮೂಲಕ ರವಾನಿಸಲಾ ಯಿತು. ಸ್ಥಳೀಯ ವಾಹನ ಚಾಲಕರು ತಮ್ಮ ವಾಹನಗಳಿಗೆ ಪ್ರತಿಭಟನೆಯ ಕರಪತ್ರ ಹಚ್ಚಿ, ಹೆಲ್ಮೆಟ್ ಧರಿಸಿ, ಪ್ಲೇಕಾರ್ಡ್ ಪ್ರದರ್ಶಿಸಿ, ಸಂಭಾವ್ಯ ರಸ್ತೆ ಅಪಘಾತದಿಂದ ಗಾಯಗೊಂಡು ರಕ್ತ ಹರಿಯುವ ಏಕಪಾತ್ರಾಭಿನಯವನ್ನು ರಸ್ತೆಯಲ್ಲಿ ಪ್ರದರ್ಶಿಸಿ ರಸ್ತೆ ಪ್ರಯಾಣಿಕರ ಗಮನ ಸೆಳೆದರು.