ತುಳು ಬಹುಭಾಷೆ- ಸಂಸ್ಕೃತಿಯ ಕೊಂಡಿ : ಕುಲ ಸಚಿವ ಎ.ಎಂ.ಖಾನ್
ತುಳುನಾಡಿನ ಪರಂಪರೆ ವಿಚಾರಗೋಷ್ಠಿ
ಮಂಗಳೂರು, ನ.19: ತುಳು ಭಾಷೆ ದೇಶ, ಸಮುದಾಯ, ಜಾತಿ- ಮತಗಳನ್ನು ಮೀರಿ ಬೆಳೆದಿರುವ ಭಾಷೆ. ಕರಾವಳಿಯಲ್ಲಿ ಬಹು ಸಂಸ್ಕೃತಿ, ದೇವರುಗಳಿದ್ದರೂ ತುಳು ಅವುಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾ ನಿಲಯದ ಕುಲಸಚಿವ ಪ್ರೊ.ಎ.ಎಂ. ಖಾನ್ ಹೇಳಿದರು.
ವಿದ್ಯಾರ್ಥಿ ತುಳು ಸಮ್ಮೇಳನದ ಅಂಗವಾಗಿ ತುಳು ಪರಿಷತ್, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ಹಾಗೂ ಸ್ನಾತಕೋತ್ತರ ಅರ್ಥ ಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ‘ತುಳುನಾಡಿನ ಇತಿಹಾಸ, ಪರಂಪರೆ ಮತ್ತು ವಾಣಿಜ್ಯ ಹಿನ್ನಲೆ ಬಗ್ಗೆ ಮಂಗಳವಾರ ಜರುಗಿದ ವಿಚಾರಸಂಕಿರಣವನ್ನು ಅವರು ಉದ್ಘಾಟಿಸಿದರು.
ತುಳು ಭಾಷೆ ಬೆಳವಣಿಗೆಗೆ ಮಂಗಳೂರು ವಿಶ್ವವಿದ್ಯಾನಿಲಯ ಪೂರ್ಣ ಬೆಂಬಲ ನೀಡುತ್ತಿದೆ. ಈ ಬೆಂಬಲ ಮುಂದುವರಿಯಲಿದೆ. ವಿ.ವಿಯಲ್ಲಿ ತುಳು ಅಧ್ಯಯನ ಪೀಠ ಆರಂಭಗೊಂಡಿದೆ. ಸ್ನಾತಕೋತ್ತರ ಪದವಿ ಆರಂಭಿಸಿದ್ದೇವೆ. ತುಳು ಸರ್ಟಿಫಿಕೇಟ್ ಕೋರ್ಸುಗಳು ಆರಂಭಗೊಂಡಿವೆ ಎಂದು ತಿಳಿಸಿದರು.
ಬ್ಯಾಂಕಿಂಗ್, ವಾಣಿಜ್ಯ ಚಟುವಟಿಕೆ, ಔದ್ಯೋಗಿಕ ಸಹಿತಿ ವಿವಿಧ ಕಾರಣಗಳಿಂದ ತುಳುವರು ಜಗದಗಲ ವ್ಯಾಪಿಸಿದ್ದಾರೆ. ದೇಶದಾದ್ಯಂತ ಮಾತ್ರವಲ್ಲದೆ, ದೂರದ ಕುವೈತ್, ದುಬೈ, ಸೌದಿ ಅರೇಬಿಯಾ ಸಹಿತ ವಿವಿಧ ಕೊಲ್ಲಿ ರಾಷ್ಟ್ರಗಳಲ್ಲಿ ಕೂಡ ತುಳು ಮಾತನಾಡುವ ಗಮನಾರ್ಹ ಸಂಖ್ಯೆಯ ಜನರು ಇಂದು ನಮಗೆ ಕಾಣಸಿಗುತ್ತಾರೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು, ಬದುಕಿನಂತೆ ಭಾಷೆಯೂ ಬದಲಾಗುತ್ತದೆ. ನಾವು ಹೇಗೆ ಜೀವಿಸಿದ್ದೆವು ಎಂದು ದಾಖಲಿಸಿದರೆ ಅದು ಮುಂದಿನ ಜನಾಂಗಕ್ಕೆ ದಾರಿದೀಪವಾಗಬಹುದು ಎಂದರು.
ವಿದ್ಯಾರ್ಥಿ ತುಳು ಸಸಮ್ಮೇಳನ ಸಮಿತಿ ಗೌರವ ಅಧ್ಯಕ್ಷ ಸ್ವರ್ಣ ಸುಂದರ್, ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ ನೀರುಮಾರ್ಗ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಗಟ್ಟಿ ಡಿ.ಎಸ್., ಧರಣೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ವಿ.ವಿ.ಕಾಲೇಜು ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಚಾಲಕ ಡಾ.ಗಣಪತಿ ಗೌಡ, ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ, ತುಳು ಸಮ್ಮೇಳನ ಸಮಿತಿ ಖಜಾಂಚಿ ಶುಭೋದಯ ಆಳ್ವ ಉಪಸ್ತಿತರಿದ್ದರು.
ತುಳು ಪರಿಷತ್ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಪ್ರಸ್ತಾವನೆಗೈದರು. ಡಾ.ಜಯವಂತ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಮಂಗಳೂರು ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ‘ತುಳುನಾಡಿನ ಇತಿಹಾಸ, ಪರಂಪರೆ ಮತ್ತು ವಾಣಿಜ್ಯ ಹಿನ್ನೆಲೆ ಬಗ್ಗೆ ಮಂಗಳವಾರ ಜರುಗಿದ ವಿಚಾರಸಂಕಿರಣದ ಸಭಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಜಿಪಂ ಸದಸ್ಯೆ ಮಮತಾ ಗಟ್ಟಿ ದೀಪ ಬೆಳಗಿದರು.
ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು, ವಿದ್ಯಾರ್ಥಿ ತುಳು ಸಮ್ಮೇಳನ ಸಮಿತಿ ಗೌರವ ಅಧ್ಯಕ್ಷ ಸ್ವರ್ಣ ಸುಂದರ್, ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ ನೀರುಮಾರ್ಗ, ಜಿಪಂ ಸದಸ್ಯರಾದ ಮಮತಾ ಗಟ್ಟಿ ಡಿ.ಎಸ್., ಧರಣೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.