ತಲಪಾಡಿ: ಎಸ್ಡಿಪಿಐಯಿಂದ ಸನ್ಮಾನ, ಅಭಿನಂದನಾ ಕಾರ್ಯಕ್ರಮ
ಬಂಟ್ವಾಳ, ಡಿ.5: ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿಯ ವತಿಯಿಂದ ನೂತನ ಪುರಸಭಾ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಪಕ್ಷದ ಕಾರ್ಪೊರೇಟರ್ಗಳಿಗೆ ಸನ್ಮಾನ ಕಾರ್ಯಕ್ರಮ ತಲಪಾಡಿ ಅಲ್-ಖಝಾನದ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆಯಿತು.
ಎಸ್ಡಿಪಿಐ ಪುರಸಭಾ ಸಮಿತಿ ಅಧ್ಯಕ್ಷ ಮುನೀಶ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್ಡಿಪಿಐಯಿಂದ ಸ್ಪರ್ಧಿಸಿ ಖಾತೆ ತೆರೆದುಕೊಟ್ಟ ಕ್ಷೇತ್ರ ಬಂಟ್ವಾಳ. ಹೀಗಿರುವಾಗ ಮುಂದಿನ ದಿನಗಳಲ್ಲಿ ಪಕ್ಷದ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷವನ್ನು ಮತ್ತುಷ್ಟು ಬಲಿಷ್ಠಪಡಿಸಬೇಕಾಗಿದೆ ಎಂದರು.
ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಅಬ್ದುಲ್ ಮಜೀದ್ ಖಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ವಿವಿಧೆಡೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ್ದು, ಇದು ದೌರ್ಜನ್ಯಕ್ಕೊಳಗಾದ, ದಮನಿತರ ಗೆಲುವಾಗಿದೆ. ಬೀದಿಯಲ್ಲಿ ಬೊಬ್ಬೆ ಹೊಡೆಯಲು, ಧರಣಿ, ಪ್ರತಿಭಟನೆ ನಡೆಸಲು ಸೀಮಿತ ಎಂದು ವ್ಯಂಗ್ಯವಾಡುತ್ತಿದ್ದ ಕಾಂಗ್ರೆಸ್ನ ಎದೆಯಲ್ಲಿ ನಡುಕ ಉಂಟಾಗಿದೆ ಎಂದು ಹೇಳಿದರು.
ಪಿಎಫ್ಐ ರಾಜ್ಯ ಸಮಿತಿ ಸದಸ್ಯ ಎ.ಕೆ.ಅಶ್ರಫ್ ಮುಖ್ಯಭಾಷಣ ಮಾಡಿ, ಪ್ರಚಲಿತ ದಿನಗಳಲ್ಲಿ ದೇಶದ ಒಂದೊಂದು ಬೆಳವಣಿಗೆಯೂ ಸಂಶಯಾಸ್ಪದವಾಗಿದೆ. ನ್ಯಾಯ, ಹಕ್ಕು ನಿರಾಕರಣೆಯಾಗುತ್ತಿದ್ದು, ಮೂಲನಿವಾಸಿಗಳಾಗಿರುವ ಮುಸ್ಲಿಮರು ಅಭದ್ರತೆಯಿಂದ ಜೀವಿಸುವ ಬಹಳಷ್ಟು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ ಎಂದ ಅವರು, ನೆಲದ ಸತ್ಯವನ್ನು ಆಕಾಶದ ಎತ್ತರಕ್ಕೆ ತಿಳಿಸುವ ಕೆಲಸ ಮಾಡುತ್ತಿದ್ದ ಕಾರಣಕ್ಕಾಗಿ ದಿನದಿಂದ ದಿನಕ್ಕೆ ಎಸ್ಡಿಪಿಐ ಪಕ್ಷದ ಸಿದ್ಧಾಂತವನ್ನು ಒಪ್ಪಿ ಜನರು ಮುಕ್ತವಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿ, ೧೦ ವರ್ಷಗಳ ಇತಿಹಾಸವಿರುವ ಎಸ್ಡಿಪಿಐ ಚಳವಳಿಯ ಮೂಲಕ ೪ನೇ ಪಕ್ಷವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹಿರಿಯರಾದ ಟಿ.ಮುಹಮ್ಮದ್ (ಪುತ್ತೋನಾಕ), ಶೇಕ್ ಮೋನಾಕ, ಮುಹಮ್ಮದ್ ಬದ್ರುದ್ದೀನ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐಎಂಆರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಸಜಿಪ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಜಿಪ, ತಲಪಾಡಿ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಕೆ.ಎ., ಬಂಟ್ವಾಳ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಇಸ್ಮಾಯೀಲ್ ಬಾವ, ವಿಟ್ಲ ಪಡ್ನೂರು ಗ್ರಾಪಂ ವಲಯಾಧ್ಯಕ್ಷ ಮುಹಮ್ಮದ್ ಕಡಂಬು, ಕಾರ್ಪೊರೇಟ್ಗಳಾದ ಮುನೀಬ್ ಬೆಂಗರೆ, ಸಂಶಾದ್ ಅಬೂಬಕರ್, ಬಂಟ್ವಾಳ ಪುರಸಭಾ ಸದಸ್ಯರಾದ ಇದ್ರೀಸ್ ಪಿ.ಜೆ., ಝೀನತ್, ಶಂಶಾದ್, ಮಾಜಿ ಸದಸ್ಯೆ ಮುಮ್ತಾಝ್ ಬಿ.ಸಿ., ಘಟಕಾಧ್ಯಕ್ಷ ಶಾಹುಲ್ ಹಮೀದ್ ತಲಪಾಡಿ, ಬಶೀರ್ ಪಲ್ಲ, ಮಿಶ್ರಿಯಾ, ಮುಝೈರ್ ಕುದ್ರೋಳಿ, ಕಬೀರ್ ಬಜಾಲ್, ಹನೀಫ್ ಕಾವೂರು, ಅಬೂಬಕರ್ ಕುಳಾಯಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಅಕ್ಬರ್ ಅಲಿ ಸನ್ಮಾನಿತರ ಪಟ್ಟಿವಾಚಿಸಿದರು.
ಅನ್ವರ್ ಕೆ.ಎಚ್. ಸ್ವಾಗತಿಸಿದರು. ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಇಸಾಕ್ ತಲಪಾಡಿ, ಇಕ್ಬಾಲ್ ನಂದರಬೆಟ್ಟು ಸಹಕರಿಸಿದರು.