13 ಕ್ಷೇತ್ರಗಳ ಬಗ್ಗೆ ಧರ್ಮಸ್ಥಳದಲ್ಲಿ ಭವಿಷ್ಯ ನುಡಿದ ಸಿಎಂ ಯಡಿಯೂರಪ್ಪ
ಧರ್ಮಸ್ಥಳ, ಡಿ.8: ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಹದಿಮೂರು ಸ್ಥಾನಗಳನ್ನು ಗೆಲ್ಲುವುದು ಖಚಿತ. ಮುಂದಿನ ಮೂರುವರೆ ವರ್ಷ ರಾಜ್ಯದಲ್ಲಿ ಸ್ಥಿರ ಸರಕಾರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅವರು ಧರ್ಮಸ್ಥಳ ಹೆಲಿಪ್ಯಾಡ್ ನಲ್ಲಿ ಮಾದ್ಯಮದವರದಿಗೆ ಮಾತನಾಡಿದರು. ನಾನು ಹಾಗೂ ಸಚಿವರು ಎಲ್ಲ ಕ್ಷೇತ್ರಗಳಿಗೂ ತೆರಳಿ ಪ್ರಚಾರ ಮಾಡಿದ್ದೇವೆ. ಗೆಲ್ಲುವ ವಿಶ್ವಾಸವಿದೆ. ಒಂದೊಂದು ಸ್ಥಾನ ಕಾಂಗ್ರೆಸ್ ಹಾಗೂ ಜನತಾದಳಕ್ಕೆ ಸಿಗಬಹುದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ ಮಂಜುನಾಧ ಸ್ವಾಮಿಯವರಲ್ಲಿ ರಾಜ್ಯಕ್ಕೆ ಒಳಿತಾಗಲಿ, ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ ಎಂದು ಪ್ರಾರ್ಥನೆ ಮಾಡಲಿದ್ದೇನೆ. ಶ್ರೀ ಕ್ಷೇತ್ರಕ್ಕೆ ನೀರೊದಗಿಸುವ ಕಿಂಡಿ ಅಣೆಕಟ್ಟಿನ ದುರಸ್ಥಿಗೆ ಅಗತ್ಯ ಅನುದಾನ ಮಂಜೂರು ಮಾಡಿದ್ದು, ಕೂಡಲೇ ಕಾಮಗಾರಿ ಅರಂಭಿಸಲಾಗುವುದು. ಸಿದ್ದರಾಮಯ್ಯ ಅವರು ಕೆಂದ್ರಕ್ಕೆ ಜಿಎಸ್ಟಿ ಪಾವತಿಸದಿರುವ ಬಗ್ಗೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ವಿರೋಧ ಪಕ್ಷದ ನಾಯಕರು ಮಾತನಾಡುವಾಗ ವಿಚಾರ ತಿಳಿದುಕೊಂಡು ಮಾತನಾಡಲಿ ಎಂದರು.
ಮುಖ್ಯಮಂತ್ರಿಯವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಶಾಸಕರಾದ ಹರೀಶ್ ಪೂಂಜ, ಸಂಜೀವ ಮಟಂದೂರು, ರಾಜೇಶ್ ನಾಯ್ಕ್, ಜಿಲ್ಲಾ ಧಿಕಾರಿ ಸಿಂಧೂ ರೂಪೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಸೆಲ್ವಮಣಿ ಮೊದಲಾದವರು ಉಪಸ್ಥಿತರಿದ್ದರು.