ಭಟ್ಕಳ: ಹೊಳೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಮೃತ್ಯು
ಭಟ್ಕಳ: ಹೊಳೆಯೊಂದರಲ್ಲಿ ಬಿದ್ದಿರುವ ತೆಂಗಿನ ಕಾಯಿಯನ್ನು ತೆಗೆಯಲು ಹೋಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೈಹೊಳೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಅಹಮದ್ ರುವೇಝ್ ಕರೀಮಿ(17) ಎಂದು ಗುರುತಿಸಲಾಗಿದ್ದು, ಇಲ್ಲಿನ ಅನಂದಾಶ್ರಮ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದ.
ಮಗ್ದೂಮ್ ಕಾಲೋನಿಯ ನಿವಾಸಿ ರಿಯಾಝ್ ಕರೀಮಿಯವರ ಪುತ್ರನಾಗಿರುವ ಈತ ಪ್ರಾಥಮಿಕ ವಿದ್ಯಾಭ್ಯಾಸವನ್ನು ದುಬೈಯಲ್ಲಿ ಪೂರ್ಣಗೊಳಿಸಿ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಉತ್ತೀರ್ಣನಾಗಿದ್ದು, ಸದ್ಯ ಅಂದಾಶ್ರಮ ಕಾನ್ವೆಂಟ್ ಪಿ.ಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಈತ ಮುಗ್ಲಿಹೊಂಡದಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿದ್ದ ಎನ್ನಲಾಗಿದ್ದು, ಹೊಳೆಯಲ್ಲಿ ಬಿದ್ದಿರುವ ತೆಂಗಿನ ಕಾಯಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆಯಿತು ಎನ್ನಲಾಗಿದೆ. ತಕ್ಷಣವೇ ಸ್ಥಳಿಯರು ಈತನನ್ನು ಹೊಳೆಯಿಂದ ಹೊರತೆಗೆದು ಆಸ್ಪತ್ರೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.