ಅನಿವಾಸಿಗಳ ನೆರವಿಗಾಗಿ ಬೆಂಗಳೂರು, ಮಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಬಿಸಿಎಫ್ ಮನವಿ
ಮಂಗಳೂರು, ಮೇ.7: ಕೊರೋನ ಸಂಕಷ್ಟದಿಂದ ವಿದೇಶದಲ್ಲಿ ಸಿಲುಕಿಕೊಂಡಿರುವ ಅನಿವಾಸಿಗಳು ತಾಯ್ನಾಡಿಗೆ ಮರಳಲು ಸಹಕಾರಿಯಾಗುವಂತೆ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸಬೇಕು ಎಂದು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಹಾಗೂ ಸದಾನಂದ ಗೌಡ ಅವರಿಗೆ ಬ್ಯಾರೀಸ್ ಕಲ್ಚರಲ್ ಫೋರಮ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್), ದುಬೈ, ಯುಎಇ ಮನವಿ ಮಾಡಿದೆ.
ಕೋವಿಡ್19 ಕಾರಣದಿಂದ ಯುಎಇಯಲ್ಲಿ ಸಂಕಷ್ಟಕ್ಕೊಳಗಾಗಿ ಸಿಲುಕಿಕೊಂಡು, ತಾಯ್ನಾಡಿಗೆ ಮರಳಲು ಬಯಸುತ್ತಿರುವ ಸಾವಿರಾರು ಅನಿವಾಸಿ ಕನ್ನಡಿಗರಿಗೆ ಅಗತ್ಯವಾದ ಸಹಾಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರಕಾರವು ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಈ ನಿಟ್ಟಿನಲ್ಲಿ ಇಲ್ಲಿಯ ಸರಕಾರದೊಂದಿಗೆ ಕೈಜೋಡಿಸಿರುವ ಕೆಲವು ಆಯ್ದ ಸೇವಾ ಸಂಘಟನೆಗಳೊಂದಿಗೆ ಸೇರಿಕೊಂಡು ಬ್ಯಾರೀಸ್ ಕಲ್ಚರಲ್ ಫೋರಮ್ ತನ್ನ ಕೈಲಾದ ಸೇವಾ ಕಾರ್ಯವನ್ನು ಮಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ವಿಮಾನಯಾನ ದರಕ್ಕೆ ಸಂಭಂದಿಸಿದಂತೆ ವಿಶೇಷ ರಿಯಾಯಿತಿಯನ್ನು ನೀಡಿ ಹಾಗೂ ಈಗಾಗಲೇ ರಿಟರ್ನ್ ಟಿಕೆಟ್ ಹೊಂದಿರುವವರೊಂದಿಗೆ ಯಾವುದೇ ಅಧಿಕ ಶುಲ್ಕ ನೀಡದೆ ಸಹಕರಿಸಬೇಕೆಂದು ವಿನಂತಿಸುತ್ತಿದ್ದೇವೆ. ಈ ಸಂತ್ರಸ್ತರಲ್ಲಿ ಗಣನೀಯ ಸಂಖ್ಯೆಯಲ್ಲಿ ಅನಾರೋಗ್ಯ ಪೀಡಿತರು, ಗರ್ಭಿಣಿಯರು, ಹಿರಿಯರು, ಮಕ್ಕಳು ಸೇರಿದ್ದು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರ ಕ್ರಮ ಕೈಕೊಳ್ಳಬೇಕು ಎಂದು ಬ್ಯಾರೀಸ್ ಕಲ್ಚರಲ್ ಫೋರಮ್ ಅಧ್ಯಕ್ಷ ಡಾ. ಬಿ.ಕೆ ಯೂಸುಫ್, ಫೋರಮ್ ನ ಪ್ರಧಾನ ಪೋಷಕ ಮುಮ್ತಾಜ್ ಅಲಿ ಮನವಿ ಮಾಡಿದ್ದಾರೆ.