ಉತ್ತರ ಪ್ರದೇಶದಲ್ಲಿ ಬಾಕಿಯಾಗಿದ್ದ ಮುಡಿಪು ನವೋದಯದ ವಿದ್ಯಾರ್ಥಿಗಳು ವಾಪಸ್
45 ದಿನ ಯುಪಿಯಲ್ಲಿ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಕರಾವಳಿಯ 22 ವಿದ್ಯಾರ್ಥಿಗಳು
ಕೊಣಾಜೆ, ಮೇ 8: ಕೊರೋನ ಸೋಂಕು ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ರೈಲು ಸಂಚಾರ ಹಾಗೂ ಇತರ ಸಂಚಾರ ವ್ಯವಸ್ಥೆಯೂ ರದ್ದಾದ ಪರಿಣಾಮ ಉತ್ತರ ಪ್ರದೇಶದ ಜೆ.ಪಿ.ನಗರದ ಜವಹರಲಾಲ್ ನವೋದಯ ಶಾಲೆಯಲ್ಲಿ ಬಾಕಿಯಾಗಿದ್ದ ಮುಡಿಪು ನವೋದಯ ಶಾಲೆಯ 22 ವಿದ್ಯಾರ್ಥಿಗಳು ಶುಕ್ರವಾರ ಮುಂಜಾನೆ ಸುರಕ್ಷಿತವಾಗಿ ಮುಡಿಪುವಿನ ನವೋದಯ ವಿದ್ಯಾಲಯ ತಲುಪಿದ್ದಾರೆ.
ಸುಮಾರು 45 ದಿನಗಳ ಲಾಕ್ ಡೌನ್ ಸಮಸ್ಯೆಯಿಂದ ಪೋಷಕರಿಂದ ದೂರ ಉಳಿದು ಸಂಕಷ್ಟ ಎದುರಿಸಿದ್ದ ವಿದ್ಯಾರ್ಥಿಗಳು ಇದೀಗ ತಾಯ್ನಾಡಿಗೆ ಬಂದಿಳಿಯುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನವೋದಯ ವಿದ್ಯಾಲಯದ ಮೈಗ್ರೇಶನ್ ಪಾಲಿಸಿ ಪ್ರಕಾರ ಒಂಬತ್ತನೇ ತರಗತಿಯ ವ್ಯಾಸಂಗಕ್ಕಾಗಿ ಮುಡಿಪುವಿನ ಜವಾಹರ್ ಲಾಲ್ ನವೋದಯದ 22 ವಿದ್ಯಾರ್ಥಿಗಳು ಉತ್ತರ ಪ್ರದೇಶದ ಜೆ.ಪಿ.ನಗರದ ಜವಾಹರ್ ಲಾಲ್ ನವೋದಯ ವಿದ್ಯಾಲಯದಲ್ಲಿ ಒಂದು ವರ್ಷದ ವ್ಯಾಸಂಗಕ್ಕಾಗಿ ತೆರಳಿದ್ದರು. ಈ ವಿದ್ಯಾರ್ಥಿ ತಂಡದಲ್ಲಿ 12 ವಿದ್ಯಾರ್ಥಿನಿಯರು ಮತ್ತು 10 ವಿದ್ಯಾರ್ಥಿಗಳು ಇದ್ದರು.
ಉತ್ತರ ಪ್ರದೇಶದ ಜೆ.ಪಿ.ನಗರದ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿ ಇನ್ನೇನು ರಜೆಯಲ್ಲಿ ಮಾ.24ರಂದು ಸ್ವಂತ ಊರಿಗೆ ಮರಳಲು ಸಿದ್ಧರಾಗುತ್ತಿದ್ದರು. ಈ ನಡುವೆ ಕೊರೋನ ಸೊಂಕು ರಾಷ್ಟ್ರವ್ಯಾಪ್ತಿ ಹರಡಿ ರೈಲು ಸಂಚಾರ ಸೇರಿದಂತೆ ಎಲ್ಲ ಸಂಚಾರ ವ್ಯವಸ್ಥೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಮೂರು ಸಲ ರೈಲು ಟಿಕೆಟ್ ಬುಕ್ ಮಾಡಿದ್ದು ಕೂಡಾ ರದ್ದು ಮಾಡಬೇಕಾಯಿತು. ಬಳಿಕ ವಿಮಾನದ ಮೂಲಕ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನ ನಡೆಯಿತಾದರೂ ಸಾಧ್ಯವಾಗಿರಲಿಲ್ಲ.
ಬಳಿಕ ಸರ್ಕಾರದ ವತಿಯಿಂದ ನವೋದಯ ಶಾಲೆಯಲ್ಲೇ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿದ್ಯಾರ್ಥಿಗಳು ರಜಾ ಸಮಯದಲ್ಲಿ ಅದರಲ್ಲೂ ಕೊರೋನ ಭಯದ ನಡುವೆ ಪೋಷಕರಿಂದ ದೂರವಿದ್ದು ಆತಂಕ ಎದುರಿಸುತ್ತಿದ್ದರು. ಅಲ್ಲದೆ ವಿದ್ಯಾರ್ಥಿಗಳ ಪೋಷಕರು ಕೂಡಾ ಚಿಂತೆಗೀಡಾಗಿದ್ದರು.
ಬಳಿಕ ಶಾಲಾ ಪ್ರಾಂಶುಪಾಲರು, ವಿದ್ಯಾರ್ಥಿ ಪೋಷಕರು ಸರಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಲ್ಲಿ ಸಮಸ್ಯೆ ಹೇಳಿಕೊಂಡಿದ್ದು, ಭಾರತ ಸರ್ಕಾರದ ಗೃಹ ಇಲಾಖೆ ವಿದ್ಯಾರ್ಥಿಗಳನ್ನು ಬಸ್ ಮೂಲಕ ಕರೆ ತರಲು ಅನುಮತಿ ನೀಡಿತ್ತು.
ಯುಪಿಯಿಂದ ಔರಂಗಾಬಾದ್ ವರಗೆ ಅಲ್ಲಿಯ ಶಾಲಾ ಶಿಕ್ಷಕರು ಮತ್ತು ಔರಂಗಾಬಾದ್ ನಿಂದ ಮುಡಿಪು ನವೋದಯ ಶಾಲೆಯ ಇಬ್ಬರು ಸಿಬ್ಬಂದಿ ಮತ್ತು ಇಬ್ಬರು ಪೋಷಕರು ಕೆಎಸ್ಸಾರ್ಟಿಸಿ ಬಸ್ ಮೂಲಕ ಮಕ್ಕಳನ್ನು ಕರೆ ತಂದಿದ್ದಾರೆ.
ಶಾಲೆಯಲ್ಲಿ ಆರೋಗ್ಯ ತಪಾಸಣೆ: ಇಂದು ಮುಂಜಾನೆ ಊರಿಗೆ ತಲುಪಿದ ವಿದ್ಯಾರ್ಥಿಗಳು ಸದ್ಯಕ್ಕೆ ಮುಡಿಪು ನವೋದಯ ಶಾಲೆಯಸ್ಸೇ ಉಳಿದುಕೊಂಡಿದ್ದು, ಅಲ್ಲೆ ವಿದ್ಯಾರ್ಥಿಗಳ ಜ್ಚರ ಹಾಗೂ ಇತರ ಆರೋಗ್ಯ ತಪಾಸಣೆ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಹೋಂ ಕ್ವಾರಂಟೈನ್ ಮಾಡುವುದೇ ಅಥವಾ ಶಾಲೆಯಲ್ಲೇ ಇದ್ದು ಕ್ವಾರಂಟೈನ್ ವ್ಯವಸ್ಥೆ ಮಾಡುವುದರ ಬಗ್ಗೆ ಇನ್ನು ತೀರ್ಮಾನ ಮಾಡಬೇಕಿದೆ ಎಂದು ನವೋದಯದ ಪ್ರಾಂಶುಪಾಲರು ತಿಳಿಸಿದ್ದಾರೆ.