ಆರ್ಟಿಇ ಮೊತ್ತ ಪಾವತಿಸಲು ಮುಖ್ಯಮಂತ್ರಿಗೆ ಮನವಿ
ಮಂಗಳೂರು, ಮೇ 8: ಕಳೆದ ಎರಡು ವರ್ಷದಿಂದ ಆರ್ಟಿಇ ಮೊತ್ತವು ಪಾವತಿಯಾಗದ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿದ್ದು, ತಕ್ಷಣ ಈ ಮೊತ್ತವನ್ನು ಪಾವತಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಆಂಗ್ಲಮಾಧ್ಯಮ ಶಾಲಾ ಸಂಘವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಆರ್ಟಿಇ ಯೋಜನೆಯಡಿ ಪ್ರತಿ ವರುಷವೂ ಹಿಂದಿನ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೇ.25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಸರಕಾರವು ಆ ಬಗ್ಗೆ ಕೆಲವು ನಿರ್ಬಂಧಗಳನ್ನು ವಿಧಿಸಿ ಪ್ರತಿ ವಿದ್ಯಾರ್ಥಿಗಳಿಗೆ ಮರುಪಾವತಿಯನ್ನು ಮಂಜೂರು ಮಾಡಿ ಆಯಾ ಶಾಲಾ ಖಾತೆಗಳಿಗೆ ರವಾನೆ ಮಾಡುತ್ತಿತ್ತು. ಇದೀಗ 2 ವರ್ಷದಿಂದ ಶಾಲಾ ಖಾತೆಗಳಿಗೆ ಜಮಾ ಮಾಡದೆ ಎಲ್ಲಾ ಶಾಲೆಗಳೂ ತುಂಬಾ ಕಷ್ಟ ನಷ್ಟಕ್ಕೊಳಗಾಗಿವೆ. ಇದೀಗ ಕೊರೋನ-ಲಾಕ್ಡೌನ್ನಿಂದ ಸಮಸ್ಯೆ ಬಿಗಡಾಯಿಸಿದ್ದು, ಖಾಸಗಿ ಶಾಲೆಗಳನ್ನು ಮುನ್ನೆಡೆಸುವುದೇ ಕಷ್ಟವಾಗಿದೆ. ವಿದ್ಯಾರ್ಥಿಗಳ ಬಾಕಿ ಶುಲ್ಕಗಳನ್ನೂ ಪಡೆಯಲು ಸಾಧ್ಯವಾಗಿಲ್ಲ. ಶಾಲೆಗಳು ತೀವ್ರ ಆರ್ಥಿಕ ಸಂಕಷ್ಟಗೊಳಗಾಗಿವೆ. ಹಾಗಾಗಿ ಆರ್ಟಿಇ ಮೊತ್ತ ಬಿಡುಗಡೆಗೊಳಿಸಲು ಎಸೋಸಿಯೇಶನ್ನ ಅಧ್ಯಕ್ಷ ವೈ. ಮುಹಮ್ಮದ್ ಬ್ಯಾರಿ, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಕೋಶಾಧಿಕಾರಿ ಸವಣೂರು ಸೀತಾರಾಮ್ ರೈ ಮನವಿ ಮಾಡಿದ್ದಾರೆ.