ಉಳ್ಳಾಲದಲ್ಲಿ ಕಡಲ್ಕೊರೆತ ತೀವ್ರ: ಅಲೆಗಳ ಅಬ್ಬರಕ್ಕೆ ಮನೆ ಸಮುದ್ರಪಾಲು
ಉಳ್ಳಾಲ, ಜೂ.16: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉಳ್ಳಾಲ ಸೋಮೇಶ್ವರ ಕಡಲ ತೀರದಲ್ಲಿ ಸಮುದ್ರದಬ್ಬರ ತೀವ್ರಗೊಂಡಿದೆ. ಸೋಮೇಶ್ವರದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಹಾನಿಗೀಡಾಗಿದ್ದ ಮನೆಯೊಂದು ಸೋಮವಾರ ಸಂಜೆ ಸಂಪೂರ್ಣವಾಗಿ ಸಮುದ್ರಪಾಲಾಗಿದೆ.
ಸೋಮೇಶ್ವರ ದೇವಸ್ಥಾನ ಬಳಿ ವಾಸವಾಗಿರುವ ಮೋಹನ್ ಎಂಬವರ ಮನೆಯ ಒಂದು ಗೋಡೆ ಸಮುದ್ರದ ಅಲೆಗಳು ಅಪ್ಪಳಿಸಿ ನೀರುಪಾಲಾಗಿದೆ. ಕಳೆದ ವರ್ಷ ಅಲೆಗಳ ಹೊಡೆತಕ್ಕೆ ಸಿಲುಕಿ ಭಾಗಶಃ ಹಾನಿಗೀಡಾಗಿದ್ದ ಈ ಮನೆ ನಿನ್ನೆ ಸಂಜೆ ತೀವ್ರಗೊಂಡ ಕಡಲ್ಕೊರೆತದಿಂದ ಸಂಪೂರ್ಣ ಕಡಲುಪಾಲಾಗಿದೆ. ಮೋಹನ್ ಅವರು ಈ ಮೊದಲೇ ಬೇರೊಂದು ಮನೆಯಲ್ಲಿ ವಾಸವಿದ್ದಾರೆ. ನೀರುಪಾಲಾದ ಈ ಮನೆಯ ಒಂದು ಕೋಣೆಯಲ್ಲಿ ಬಾಡಿಗೆಗೆ ವಾಸವಿದ್ದ ಕುಟುಂಬ ಈ ನಡುವೆ ಬೇರೆಡೆ ಸ್ಥಳಾಂತರಗೊಂಡಿದೆ.
ಸೋಮೇಶ್ವರ ಉಚ್ಚಿಲದಲ್ಲಿ ಸಂಪೂರ್ಣಗೊಳ್ಳದ ಬ್ರೇಕ್ ವಾಟರ್ ಕಾಮಗಾರಿಯಿಂದ ಈ ಪ್ರದೇಶದಲ್ಲಿ ಕಡಲಿನ ಅಬ್ಬರ ಜೋರಾಗಿದ್ದು, ಕಡಲ್ಕೊರೆತ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.