ಶಾಸಕ ಉಮೇಶ್ ಕತ್ತಿಯಿಂದ ಮುಸ್ಲಿಂ ಸಮುದಾಯದ ನಿಂದನೆ: ಎಸ್ಡಿಪಿಐ ಖಂಡನೆ
ಇಲ್ಯಾಸ್ ಮುಹಮ್ಮದ್ ತುಂಬೆ
ಮಂಗಳೂರು, ಜು.18: ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಮುಸ್ಲಿಂ ಸಮಾಜ ಮತ್ತು ಇಸ್ಲಾಂ ಧರ್ಮವನ್ನು ಅಪಹಾಸ್ಯ ಮಾಡಿದ್ದಾರೆ. ಈ ಘಟನೆಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನ ತಡೆಯುವ ಬಗ್ಗೆ ಕರೆಯಲಾದ ಸಭೆಯಲ್ಲಿ ಮಾತನಾಡಿದ ಉಮೇಶ್ ಕತ್ತಿ ನಮಾಜಿನ ಬಗ್ಗೆ ನಿಂದಿಸಿ ಅಪಹಾಸ್ಯ ಮಾಡಿದ್ದಾರೆ. ಈ ಘಟನೆಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ. ರೋಗವನ್ನು ತಡೆಯುವುದರಲ್ಲಿ ಎಲ್ಲಾ ಧರ್ಮೀಯರು ಸಾಮೂಹಿಕವಾಗಿ ಪ್ರಯತ್ನ ಪಡಬೇಕಾಗಿದೆ. ಕೊರೋನ ಸಾಂಕ್ರಾಮಿಕ ರೋಗವನ್ನು ಸಾರ್ವಜನಿಕರು ಒಂದಾಗಿ ಎದುರಿಸಬೇಕಾಗಿದೆ. ಜನಪ್ರತಿನಿಧಿಗಳ ಮಾತುಗಳಿಂದ ಕೋಮುಸೌಹಾರ್ದಕ್ಕೆ ಧಕ್ಕೆ ಆಗಬಾರದು ಮತ್ತು ಶಾಂತಿಭಂಗಕ್ಕೆ ಕಾರಣವಾಗಬಾರದು. ಎಲ್ಲಾ ಧರ್ಮೀಯರ ಮತ್ತು ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು. ಬಿಜೆಪಿ ಶಾಸಕರ ಈ ಹೇಳಿಕೆಯ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್ಡಿಪಿಐ ಆಗ್ರಹಿಸಿದೆ.