ಕೊರೋನ ಭ್ರಷ್ಟಾಚಾರದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಯಲಿ: ಡಿ.ಕೆ.ಶಿವಕುಮಾರ್
ಮಂಗಳೂರು, ಜು.31: ಕೊರೋನ ಹೆಸರಿನಲ್ಲಿ ಭ್ರಷ್ಟಾಚಾರ ಬಿಜೆಪಿ ಸಂಸ್ಕಾರ ಎನ್ನುವಂತಾಗಿದೆ. ಸಾರ್ವಜನಿಕ ಲೆಕ್ಕ ಸಮಿತಿ ಸಭೆ ನಡೆಸಲು ಸರಕಾರ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ದ ಬಗ್ಗೆ ಹಾಲಿ ನ್ಯಾಯಾಧೀಶ ರಿಂದ ನ್ಯಾಯಾಂಗ ತನಿಖೆ ನಡೆಯಲಿ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದ.ಕ ಜಿಲ್ಲೆಯ ಪ್ರವಾಸದ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೊರೋನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ 30 ಜನರ ತಂಡ ಭೇಟಿ ನೀಡಲಿದೆ.ಕೊರೋನಾ ಸಂತ್ರಸ್ತರಿಗೆ ದೈರ್ಯ ತುಂಬುವ,ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಭ್ರಷ್ಟಾಚಾರ ಬಯಲಿಗೆಳೆಯಲು ಕಾಂಗ್ರೆಸ್ ಕಾರ್ಯಪ್ರವ್ರತ್ತವಾಗಿದೆ. ರಾಜ್ಯದಲ್ಲಿ ಕೊವಿಡ್ ನಿಯಂತ್ರಣದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ನಮ್ಮ ಸರಕಾರದ ಬಗ್ಗೆ ಆರೋಪಗಳಿದ್ದರೂ ಸೇರಿಸಿ ಕೊರೋನ ಅಕ್ರಮದ ಬಗ್ಗೆ ಹಾಲಿ ನ್ಯಾಯಾಧೀಶರ ನೇತ್ರತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಲಿ ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
2ಸಾವಿರ ಕೋಟಿ ರೂಗಳಿಗೂ ಅಧಿಕ ಮೊತ್ತದ ಸಾರ್ವಜನಿಕ ಹಣ ಲೂಟಿ:
ರಾಜ್ಯ ಸರಕಾರ ಕೋವಿಡ್ -19 ರ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮೂಲಕ 4ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಸುರಕ್ಷಾ ಸಾಮಾಗ್ರಿ, ವೈದ್ಯಕೀಯ ಉಪಕರಣಗಳ ಖರೀದಿಗೆ ಮತ್ತು ಕಾರ್ಮಿಕ ಇಲಾಖೆಯ ಮೂಲಕ ವೆಚ್ಚಮಾಡಿರುವುದಾಗಿ ದಾಖಲೆಯಲ್ಲಿ ತಿಳಿಸಿದೆ. ಆದರೆ ಈ ಮೊತ್ತವನ್ನು ಕೇಂದ್ರ ಸರಕಾರದ ಸಾಮಾಗ್ರಿ ಖರೀದಿ ಹಾಗೂ ಇತರ ರಾಜ್ಯಗಳು ಖರೀದಿಸಿದ ಕೋವಿಡ್ ಸಂಬಂಧಿಸಿದ ಸಾಮಾಗ್ರಿಗಳ ಬೆಲೆಗೆ ಹೋಲಿಸಿದರೆ, ರಾಜ್ಯದಲ್ಲಿ 2ಸಾವಿರ ಕೋಟಿಗೂ ಅಧಿಕ ಸಾರ್ವಜನಿಕರ ಹಣ ಕೊವಿಡ್ ಹೆಸರಿನಲ್ಲಿ ಲೂಟಿಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಕೊವಿಡ್ ಸಂತ್ರಸ್ತರಿಗೆ ಹಂಚುವ ಕಿಟ್ ಗಳಲ್ಲಿ ಪಕ್ಷದ ಚಿಹ್ನೆಗಳನ್ನು ಹಾಕಿ ಹಂಚಲಾಗುತ್ತಿದೆ. ಕೊರೋನ ಸೋಂಕಿನಿಂದ ಮ್ರತ ಪಟ್ಟವರ ಮ್ರತದೇಹಗಳನ್ನು ಹೊಂಡ ಗಳಿಗೆ ಎಸೆದು ಅವಮಾನ ಮಾಡಲಾ ಗಿದೆ. ಕಣ್ಣು,ಕಿವಿ ಜೊತೆಗೆ ಹ್ರದಯವಂತಿಕೆಯೂ ಇಲ್ಲದ ರೀತಿಯಲ್ಲಿ ರಾಜ್ಯ ಸರಕಾರ ವರ್ತಿಸುತ್ತಿದೆ. ಕೊರೋನ ತಡೆಗೆ ಸರಕಾರಕ್ಕೆ ನೆರವು ನೀಡುತ್ತಾ ಬಂದಿದೆ ಹೊರತು ಕೊರೋನಾ ಹೆಸರಿನಲ್ಲಿ ನಡೆಸುತ್ತಿರುವ ಭ್ರಷ್ಟಾಚಾರಕ್ಕಲ್ಲ. ಈ ಬಗ್ಗೆ ನಡೆಯುವ ತನಿಖೆಯಲ್ಲಿ ನಮ್ಮ ಆರೋಪಗಳಲ್ಲಿ ತಪ್ಪಿದ್ದರೆ ನಾವು ನೇಣು ಗಂಬದ ಶಿಕ್ಷೆ ಅನುಭವಿಸಲು ಸಿದ್ಧವಾಗಿರು ವುದಾಗಿ ಡಿ.ಕೆ.ಶಿವಕುಮಾರ್ ರಾಜ್ಯ ಸರಕಾರಕ್ಕೆ ಸವಾಲೆಸೆದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ,ಅಭಯ ಚಂದ್ರ ಜೈನ್, ಶಾಸಕ ಯು.ಟಿ.ಖಾದರ್. ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೊ,ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ,ಐವನ್ ಡಿ ಸೋಜ, ಮಿಥುನ್ ರೈ,ಶಾಲೆಟ್ ಪಿಂಟೋ, ಮೊದಲಾದವರು ಉಪಸ್ಥಿತರಿದ್ದರು.