ಉಡುಪಿ: ಸಿಇಟಿ ಪರೀಕ್ಷೆಗೆ ಶುಕ್ರವಾರ 823 ಮಂದಿ ಗೈರು
ಉಡುಪಿ, ಜು.31: ಈ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೊನೆಯ ಎರಡು ಪರೀಕ್ಷೆಗಳು ಶುಕ್ರವಾರ ಉಡುಪಿ ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮಗಳಿಲ್ಲದೇ ಸುಗಮವಾಗಿ ನಡೆದವು. ಇಂದಿನ ಎರಡು ಪರೀಕ್ಷೆಗಳಿಗೆ ಒಟ್ಟು 823 ಮಂದಿ ಗೈರು ಹಾಜರಾಗಿದ್ದರು ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.
ಉಡುಪಿಯ ಐದು, ಕುಂದಾಪುರದ ಮೂರು ಹಾಗೂ ಕಾರ್ಕಳದ ಎರಡು ಕೇಂದ್ರಗಳಲ್ಲಿ ಬೆಳಗ್ಗೆ ನಡೆದ ರಸಾಯನ ಶಾಸ್ತ್ರ ಪರೀಕ್ಷೆಗೆ 3493 ಮಂದಿ ಹಾಜರಾಗಿ 412 ಮಂದಿ ಗೈರುಹಾಜರಾದರೆ, ಅಪರಾಹ್ನ ನಡೆದ ಭೌತಶಾಸ್ತ್ರ ಪರೀಕ್ಷೆಯನ್ನು 3494 ಮಂದಿ ಬರೆದು 411 ಗೈರು ಹಾಜರಾಗಿದ್ದರು. ಎರಡೂ ಪರೀಕ್ಷೆಗಳಿಗೆ 3905 ಮಂದಿ ಹೆಸರು ನೊಂದಾಯಿಸಿಕೊಂಡಿದ್ದರು ಎಂದವರು ತಿಳಿಸಿದರು.
ಪಾಸಿಟಿವ್ ಬಂದ ಐವರು ಹಾಜರು: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೋವಿಡ್-19ಕ್ಕೆ ಪಾಸಿಟಿವ್ ಬಂದ ಐವರು ವಿದ್ಯಾರ್ಥಿಗಳು ಇಂದು ಸಹ ಉಡುಪಿ ಬನ್ನಂಜೆಯ ಸಮಾಜ ಕಲ್ಯಾಣ ಬಾಲಕಿಯರ ವಸತಿ ನಿಲಯ ಕೇಂದ್ರದಲ್ಲಿ ಎರಡೂ ಪರೀಕ್ಷೆಗಳನ್ನು ಬರೆದಿದ್ದಾರೆ. ವಿಶೇಷ ವ್ಯವಸ್ಥೆಯೊಂದಿಗೆ ಇಬ್ಬರು ಬಾಲಕರು ಹಾಗೂ ಮೂವರು ಬಾಲಕಿಯರು ಇಲ್ಲಿ ಪರೀಕ್ಷೆ ಬರೆದಿದ್ದು, ಇವರಲ್ಲಿ ಕುಂದಾಪುರದ ಮೂವರು, ಕಾಪು ಮತ್ತು ಉಡುಪಿಯ ತಲಾ ಒಬ್ಬರು ಇದ್ದರು ಎಂದು ಡಿಡಿಪಿಯು ತಿಳಿಸಿದರು.