ಬೆಳ್ತಂಗಡಿ: ವಾಕಿಂಗ್ ತೆರಳಿದ್ದ ವ್ಯಕ್ತಿಯ ಕೊಲೆ ಪ್ರಕರಣ; ಆರೋಪಿ ಪುತ್ರನ ಸೆರೆ
ದಯಾನಂದ
ಬೆಳ್ತಂಗಡಿ, ಆ.27: ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ಬಳಿ ನಿವಾಸಿ ವಾಸು ಸಪಲ್ಯ(66) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಾಸು ಅವರ ಪುತ್ರ ದಯಾನಂದ(38)ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ದಯಾನಂದನನ್ನು ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಬುಧವಾರ ಪೊಲೀಸರು ಬಂಧಿಸಿದ್ದಾರೆ. ತಾನೊಬ್ಬನೇ ತಂದೆಯನ್ನು ಹತ್ಯೆಗೈದಿರುವುದಾಗಿ ಆರೋಪಿ ವಿಚಾರಣೆಯ ವೇಳೆ ಬಾಯಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆ.24ರಂದು ಬೆಳಗ್ಗೆ ವಾಕಿಂಗ್ ತೆರಳಿದ್ದ ವಾಸು ಸಪಲ್ಯರನ್ನು ಮನೆ ಸಮೀಪವೇ ಮಾರಕಾಸ್ತ್ರದಿಂದ ಕಡಿದು ಕೊಲೆಗೈಯಲಾಗಿತ್ತು. ಕೊಲೆ ಕೃತ್ಯದ ಬಳಿಕ ಮಂಗಳೂರಿಗೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿ ದಯಾನಂದ ನಂತೂರು ಬಳಿ ಉದ್ಯಮಿಯೊಬ್ಬರ ವಾಹನ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದನೆನ್ನಲಾಗಿದೆ. ಆ.26ರಂದು ಹಣದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸ್ನೇಹಿತನೊಬ್ಬನಿಂದ ನಗರದ ಸ್ಟೇಟ್ ಬ್ಯಾಂಕ್ ಬಳಿ ಹಣ ಪಡೆಯುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದಲ್ಲಿ ಬೆಳ್ತಂಗಡಿ ಪಿಎಸ್ಸೈ ನಂದಕುಮಾರ್ ತಂಡದ ಪಿಸಿ ವೆಂಕಟೇಶ್, ಇಬ್ರಾಹೀಂ, ಲತೀಫ್ ಈ ಕಾರ್ಯಾಚರಣೆ ನಡೆಸಿದ್ದಾರೆ.