ಉಡುಪಿ : ಪುತ್ರನಿಗೆ ಕೋವಿಡ್ ಸೋಂಕು ; ತಂದೆ ಆತ್ಮಹತ್ಯೆ
ಶಿರ್ವಾ, ಆ.27: ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ನರಳುತಿದ್ದ ಮಗನಲ್ಲಿ ಕೋವಿಡ್ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಆಘಾತಗೊಂಡ ತಂದೆ, ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳತ್ತೂರು ಗ್ರಾಮದ ಪುಂಚಲಕಾಡು ಎಂಬಲ್ಲಿಂದ ಬುಧವಾರ ವರದಿಯಾಗಿದೆ.
ಇಲ್ಲಿನ ಜ್ಯೋತಿ ನಗರದ ನಿವಾಸಿ ಸುಂದರ ಮೂಲ್ಯ (60) ಇವರು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತಿದ್ದರು. ಇವರ ಹಿರಿಯ ಮಗ ನಾಗೇಶ್, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತಿದ್ದವರು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಕೊರೋನ ಸೋಂಕು ದೃಢಗೊಂಡ ಸುದ್ದಿ ಕೇಳಿ ಆಘಾತಗೊಂಡವರು ರಾತ್ರಿ ಮನೆಯಲ್ಲಿ ವಿಷಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ಕೂಡಲೇ ಇವರನ್ನು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story