ಉಡುಪಿ: ವಾಟ್ಸ್ ಆ್ಯಪ್ ಗ್ರೂಪಿನಿಂದ ಬಡಕುಟುಂಬಕ್ಕೆ ಮನೆ ಹಸ್ತಾಂತರ
ಉಡುಪಿ, ಸೆ.1: 'ದೇವರು ಮಕ್ಕಳು ನಾವು' ವಾಟ್ಸ್ ಆ್ಯಪ್ ಗ್ರೂಪ್ನ 5ನೇ ವಾರ್ಷಿಕೋತ್ಸವವನ್ನು ನೀಲಾವರದಲ್ಲಿ ಆ.31ರಂದು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ನೀಲಾವರದಲ್ಲಿ ನೆರೆ ಹಾವಳಿಯಿಂದ ಮನೆಯನ್ನು ಕಳೆದುಕೊಂಡ ನಾಗರಾಜ -ವಿನೋದ ಕುಟುಂಬಕ್ಕೆ ಗ್ರೂಪಿನ ವತಿಯಿಂದ ಹೊಸ ಮನೆಯನ್ನು ನಿರ್ಮಿಸಿ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಈ ಮನೆ ನಿರ್ಮಿಸಲು ನೀಲಾ ವರದ ಲೂಯಿಸ್ ಡಿಸೋಜ ಕುಟುಂಬ ಸುಮಾರು 7 ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದೆ. ಸರಕಾರದ ಆಶ್ರಯ ಯೋಜನೆಯಡಿ ಸುಮಾರು 1.2ಲಕ್ಷ ರೂ. ಮತ್ತು ಉಳಿದ ಹಣವನ್ನು ಗ್ರೂಪಿನ ಸದಸ್ಯರು ಭರಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮುಂಜೆ ಸಂತ ಅಂತೋನಿ ಆರ್ಥೊ ಡೊಕ್ಸ್ ಸಿರಿಯನ್ ಚರ್ಚಿನ ಧರ್ಮಗುರು ವಂ.ಲೋರೆನ್ಸ್ ಡೇವಿಡ್ ಕ್ರಾಸ್ತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೀಲಾವರ ಗ್ರಾಪಂ ಕಾರ್ಯದರ್ಶಿ ಹರೀಶ್, ಪ್ರಕಾಶ್ ಡಿಸೋಜ, ಉದ್ಯಮಿ ಬೊನಿಫಾಸ್ ಮಸ್ಕರೇನಸ್, ದಾನಿ ಗಳಾದ ಜೂಲಿಯನ್ ಮಸ್ಕರೇನಸ್ ಉಪಸ್ಥಿತರಿದ್ದರು.
ಗ್ರೂಪಿನ ಮರ್ಲಿನ್ ಡಿಸೋಜ ಸ್ವಾಗತಿಸಿದರು. ಸ್ಮಿತಾ ಮಸ್ಕರೇನಸ್ ವಂದಿಸಿದರು. ಮೀನಾ ಡಿಸೋಜ ದಾನಿಗಳ ಹೆಸರು ವಾಚಿಸಿದರು. ವಲೇರಿಯನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.