ಕೊಪ್ಪ ಪೊಲೀಸರ ಕಾನೂನು ಬಾಹಿರ ವರ್ತನೆ ಆರೋಪ : ಖಂಡನೆ
ಉಡುಪಿ, ಸೆ. 8: ಸಾಮಾಜಿಕ ಹೋರಾಟಗಾರ ಕೆ.ಎಲ್.ಅಶೋಕ್ ಹಾಗೂ ಅವರ ಕುಟುಂಬದವರನ್ನು ಕ್ಷುಲ್ಲಕ ಕಾರಣಕ್ಕಾಗಿ ವಿನಾಕಾರಣ ಹೀನಾಯವಾಗಿ ನಡೆಸಿಕೊಂಡಿದೆ ಎಂದು ಆರೋಪಿಸಿದ್ದು, ಕೊಪ್ಪ ಪೋಲಿಸರ ವಿರುದ್ಧ ಕ್ರಮ ಜರುಗಿಸುವಂತೆ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲೆ ಆಗ್ರಹಿಸಿದೆ.
ನೋ ಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿದ ವಿಚಾರದಲ್ಲಿ ಪೊಲೀಸ್ ಪೇದೆ ಹಾಗೂ ಮಹಿಳಾ ಪೋಲಿಸರು ಬಂದು, ಅಶೋಕ್ರನ್ನು ದಬಾಯಿಸಿ, ನಿಂದಿಸಿ ದ್ದಾರೆ. ಅಲ್ಲದೆ ಠಾಣೆಗೆ ಕರೆದುಕೊಂಡು ಹೋಗಿ ಮಾನಸಿಕ ಹಿಂಸೆಗೆ ಗುರಿ ಮಾಡಿದ್ದಾರೆ. ಠಾಣಾಧಿಕಾರಿ ರವಿ, ಅಶೋಕ್ ಜೊತೆ ಅಧಿಕಾರಯುಕ್ತವಾಗಿ ವರ್ತಿಸಿ ಅವಮಾನಿಸಿದ್ದಾರೆ. ಇದು ಕಾನೂನುಬಾಹಿರ ದುರ್ವತನೆಯಾಗಿದೆ ಎಂದು ವೇದಿಕೆ ಆರೋಪಿಸಿದೆ.
ನಾಗರಿಕರನ್ನು ವಿನಾಕಾರಣ ಈ ಬಗೆಯಲ್ಲಿ ಹಿಂಸಿಸುವ ಕೊಪ್ಪಪೋಲಿಸರ ಕಾನೂನುಬಾಹಿರ ವರ್ತನೆ ಖಂಡನೀಯ. ಪ್ರಕರಣಕ್ಕೆ ಸಂಬಂಧಿಸಿದ ಪೋಲಿಸ್ ಪೇದೆ ಹಾಗು ಠಾಣಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸ ಬೇಕು ಎಂದು ವೇದಿಕೆಯ ಜಿಲ್ಲಾ ಸಂಚಾಲಕ ಕೆ.ಫಣಿರಾಜ್ ಚಿಕ್ಕಮಗಳೂರು ಎಸ್ಪಿಯವರನ್ನು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.