ದ.ಕ. ಜಿಲ್ಲೆ : ಕೋವಿಡ್ಗೆ ಒಂಬತ್ತು ಬಲಿ, 308 ಮಂದಿಗೆ ಕೊರೋನ ಸೋಂಕು
398 ಮಂದಿ ಕೊರೋನ ಮುಕ್ತ
ಮಂಗಳೂರು, ಸೆ.17: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮತ್ತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಗುರುವಾರ 308 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದ್ದು, 398 ಮಂದಿ ಗುಣಮುಖರಾಗಿದ್ದಾರೆ.
ಮೃತರಲ್ಲಿ ಮಂಗಳೂರು ತಾಲೂಕಿನಲ್ಲಿ ಐವರು, ಬಂಟ್ವಾಳ ತಾಲೂಕಿನಲ್ಲಿ ಇಬ್ಬರು, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ತಲಾ ಓರ್ವರು ಇದ್ದಾರೆ. ಮೃತರೆಲ್ಲ ಕೋವಿಡ್ ಸೋಂಕಿನ ಜೊತೆಗೆ ವಿವಿಧ ರೋಗಗಳಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಮೃತರ ಸಂಖ್ಯೆ 461ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
308 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಗುರುವಾರ ಮತ್ತೆ 308 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರಲ್ಲಿ 176 ಮಂದಿ ಸಾಮಾನ್ಯ ಶೀತ ಲಕ್ಷಣದವರಿದ್ದಾರೆ. ಸೋಂಕಿತರ ಸಂಪರ್ಕದಲ್ಲಿದ್ದ 101 ಮಂದಿ, ತೀವ್ರ ಉಸಿರಾಟ ತೊಂದರೆಯ ಒಂಬತ್ತು ಮಂದಿಗೆ ಸೋಂಕು ತಗುಲಿದೆ. 22 ಮಂದಿಗೆ ಸೋಂಕು ಯಾರಿಂದ ತಗುಲಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ.
ಮಂಗಳೂರು ತಾಲೂಕಿನಲ್ಲಿ ಗುರುವಾರ 202 ಮಂದಿ ಸೋಂಕಿತರ ಕಂಡುಬಂದಿದ್ದಾರೆ. ಬಂಟ್ವಾಳ-37, ಪುತ್ತೂರು-30, ಸುಳ್ಯ-10, ಬೆಳ್ತಂಗಡಿ-24, ಹೊರಜಿಲ್ಲೆಯ ಐವರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18,866ಕ್ಕೆ ಏರಿಕೆಯಾಗಿದೆ.
398 ಮಂದಿ ಗುಣಮುಖ: ಜಿಲ್ಲೆಯಲ್ಲಿ ಗುರುವಾರ ಮತ್ತೆ 398 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 172 ಮಂದಿ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 226 ಮಂದಿ ಕೊರೋನಮುಕ್ತರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 14,004ಕ್ಕೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ 4,401 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.