ಅಪರಿಚಿತರಿಬ್ಬರಿಂದ ಮಣಿಪಾಲ, ಉಡುಪಿಯ ಮೂರು ಕಡೆ ಸುಲಿಗೆ; ಮೊಬೈಲ್, ಹಣ ಲೂಟಿ, ಇಬ್ಬರಿಗೆ ಗಾಯ
ಉಡುಪಿ, ಸೆ.19: ಅಪರಿಚಿತ ವ್ಯಕ್ತಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಒಬ್ಬಂಟಿ ಯಾಗಿ ಹೋಗುತ್ತಿದ್ದವರನ್ನು ಗುರಿ ಮಾಡಿಕೊಂಡು ಸೆ.19ರಂದು ಬೆಳಗಿನ ಜಾವ ಮಣಿಪಾಲ ಮತ್ತು ಉಡುಪಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ಸುಲಿಗೆ ಮಾಡಿರುವ ಬಗ್ಗೆ ವರದಿಯಾಗಿದೆ.
ಮಣಿಪಾಲ ವಿ.ಪಿ.ನಗರದ ನಿವಾಸಿ, ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಧರಣೇಂದ್ರ(28), ಉದ್ಯಾವರ ಸಂಪಿಗೆನಗರ ನಿವಾಸಿ, ಮಣಿಪಾಲ ಎಂಟಿ ಎನ್ಎಲ್ ಕಂಪೆನಿಯ ಉದ್ಯೋಗಿ ಯತೀಂದ್ರ ಆನಂದ ಗಾಣಿಗ(29) ಹಾಗೂ ಮಣಿಪಾಲ ಸರಳೇಬೆಟ್ಟು ನಿವಾಸಿ, ಮೀನು ವ್ಯಾಪಾರಿ ನಿತೀಶ್ ದೇವಾಡಿಗ(40) ಎಂಬವರು ಸುಲಿಗೆಗೆ ಒಳಗಾಗಿದ್ದು, ಇವರಲ್ಲಿ ಧರಣೇಂದ್ರ ಹಾಗೂ ಯತೀಂದ್ರ ಎಂಬವರಿಗೆ ಸುಲಿಗೆಕೋರರು ಆಯುಧವೊಂದರಲ್ಲಿ ಇರಿದ ಪರಿಣಾವು ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಬೈಕಿನಲ್ಲಿ ಬಂದ 25ರಿಂದ 28ವರ್ಷ ಪ್ರಾಯದ ಯುವಕರಿಬ್ಬರು, ಮೊದಲು ಬೆಳಗಿನ ಜಾವ 4ಗಂಟೆ ಸುಮಾರಿಗೆ ಮಣಿಪಾಲ ಈಶ್ವರ ನಗರ ಎಂಬಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿದರು. ಆ ವ್ಯಕ್ತಿಯ ಬಳಿಕ ಏನು ಸಿಗದ ಕಾರಣ ತಂಡ ಪರಾರಿಯಾ ಯಿತು. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಅಲ್ಲಿಂದ ಇಂದ್ರಾಳಿ ಪೆಟ್ರೋಲ್ ಬಂಕ್ ಸಮೀಪ ಬಂದ ಇವರು, ಬೆಳಗಿನ ಜಾವ 4:15ರ ಸುಮಾರಿಗೆ ಬೆಂಗಳೂರಿನಿಂದ ರೈಲಿನಲ್ಲಿ ಬಂದು ಮನೆಗೆ ತೆರಳುತ್ತಿದ್ದ ಧರಣೇಂದ್ರ ಅವರನ್ನು ತಡೆದು ನಿಲ್ಲಿಸಿದರೆನ್ನಲಾಗಿದೆ. ಬಳಿಕ ತಮ್ಮಲ್ಲಿದ ಆಯುಧವನ್ನು ತೋರಿಸಿ ಧರಣೇಂದ್ರ ಅವರಲ್ಲಿದ್ದ 4ಸಾವಿರ ರೂ. ವೌಲ್ಯದ ಮೊಬೈಲ್ ಹಾಗೂ 1500ರೂ. ನಗದು ದೋಚಿದ್ದಾರೆ.ಈ ಸಂದರ್ಭ ದಲ್ಲಿ ವಿರೋಧ ವ್ಯಕ್ತಪಡಿಸಿದ ಧರಣೇಂದ್ರರನ್ನು ಸುಲಿಗೆಕೋರರು, ತಮ್ಮಲ್ಲಿದ್ದ ಆಯುಧದಿಂದ ಚುಚ್ಚಿ ಗಾಯಗೊಳಿಸಿದ್ದಾರೆ ಎಂದು ದೂರಲಾಗಿದೆ.
ಅಲ್ಲಿಂದ ನೇರ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಸ್ಥಾನದ ಗುಡಿಯ ಸಮೀಪ ಬೆಳಗಿನ ಜಾವ 4:35ರ ಸುಮಾರಿಗೆ ತೆರಳಿದ ಸುಲಿಗೆಕೋರರು, ಬೈಕಿನಲ್ಲಿ ಮಲ್ಪೆಗೆ ಮೀನು ಖರೀದಿಸಲು ತೆರಳುತ್ತಿದ್ದ ನಿತೀಶ್ ಅವರನ್ನು ರಸ್ತೆ ಕೇಳುವ ನೆಪದಲ್ಲಿ ತಡೆದು ನಿಲ್ಲಿಸಿದರು. ಬಳಿಕ ತಮ್ಮಲ್ಲಿದ್ದ ಆಯುಧವನ್ನು ತೋರಿಸಿ, ನಿತೀಶ್ ಅವರ ಬಳಿ ಇದ್ದ 4000ರೂ. ವೌಲ್ಯದ ಮೊಬೈಲ್ ಹಾಗೂ 15 ಸಾವಿರ ರೂ. ನಗದು ದೋಚಿ ಪಾರಿಯಾದರು.
ಮುಂದುವರೆದ ಸುಲಿಗೆಕೋರರು ಅಲೆವೂರು ಗುಡ್ಡೆಯಂಗಡಿ ಜಂಕ್ಷನ್ ಬಳಿ ಬೆಳಗಿನ ಜಾವ 5:15ರ ಸುಮಾರಿಗೆ ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯತೀಂದ್ರ ಅವರನ್ನು ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿ, ಹಲ್ಲೆ ನಡೆಸಿ, ತಮ್ಮಲ್ಲಿದ್ದ ಸ್ಕ್ರೂಡೈವರ್ನಿಂದ ತಿವಿದು ಗಾಯ ಗೊಳಿಸಿದರೆನ್ನಲಾಗಿದೆ. ಬಳಿಕ ಅವರಲ್ಲಿದ್ದ ಮೊಬೈಲ್ ಸಹಿತ 10ಸಾವಿರ ರೂ. ವೌಲ್ಯದ ಸೊತ್ತುಗಳಿದ್ದ ಬ್ಯಾಗ್ ದೋಚಿ ಪರಾರಿಯಾದರು. ಇಂದ್ರಾಳಿ ಮತ್ತು ಅಲೆವೂರು ಗುಡ್ಡೆ ಯಂಗಡಿಯಲ್ಲಿ ನಡೆದ ಘಟನೆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮತ್ತು ಕುಕ್ಕಿಕಟ್ಟೆಯ ಘಟನೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ಕಡೆಗಳಲ್ಲಿಯೂ ಒಂದೇ ತಂಡ ಕೃತ್ಯ ಎಸಗಿದ್ದು, ಘಟನೆಗೆ ಸಂಬಂಧಿಸಿ ಪೊಲೀಸ್ ತಂಡ ತನಿಖೆ ಹಾಗೂ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಸುಲಿಗೆಗೆ ಒಳಗಾದವರು ತಕ್ಷಣವೇ ಕಂಟ್ರೋಲ್ ರೂಮ್ಗೆ ಕರೆ ಮಾಡುತ್ತಿದ್ದರೆ ಆರೋಪಿಗಳನ್ನು ಪತ್ತೆ ಹಚ್ಚಲು ಸುಲಭವಾಗುತ್ತಿತ್ತು. ಬೆಳಗಿನ ಜಾವ ವಾಕಿಂಗ್ ತೆರಳುವಾಗ ಇಂತಹ ಕೃತ್ಯಗಳು ಹೆಚ್ಚು ನಡೆಯುವ ಸಾಧ್ಯತೆ ಇರುವುದರಿಂದ ಪೊಲೀಸ್ ಗಸ್ತು, ಚೆಕ್ಪೋಸ್ಟ್ ಗಳನ್ನು ರಚಿಸಲಾಗಿದೆ.
-ವಿಷ್ಣುವರ್ನ್, ಪೊಲೀಸ್ ಅಧೀಕ್ಷಕ, ಉಡುಪಿ