ಹಳೆಯಂಗಡಿ ಪರಿಸರದಲ್ಲಿ ಭಾರಿ ಮಳೆ: ಅಪಾರ ಕೃಷಿ ಹಾನಿ, ನೆರೆ ಸಂತ್ರಸ್ತರ ರಕ್ಷಣೆ
ಮುಲ್ಕಿ: ಹಳೆಯಂಗಡಿ ಪರಿಸರದಲ್ಲಿ ಭಾರಿ ಮಳೆಗೆ ನೆರೆ ಉಂಟಾಗಿದ್ದು ಅಪಾರ ಕೃಷಿ ಹಾನಿ ಸಂಭವಿಸಿದೆ.
ಮಳೆಗೆ ಪಡುಪಣಂಬೂರು ಮೇಗಿನ ನೆಲೆ ಶ್ರೀ ಅನಂತನಾಥ ಸ್ವಾಮಿ ಬಸದಿ ಆವರಣ ಗೋಡೆ ಕುಸಿದಿದೆ. ಸ್ಥಳಕ್ಕೆ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಳೆಯಂಗಡಿಯ ಕೊಳುವೈಲು ಪರಿಸರದಲ್ಲಿ ಕೃತಕ ನೆರೆಯಿಂದಾಗಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಹಳೆಯಂಗಡಿ ಬಳಿಯ ಪಕ್ಷಿಕೆರೆ ಅತ್ತೂರು ಬೈಲು ಮಹಾಗಣಪತಿ ಮಂದಿರ ಮುಳುಗಡೆಯಾಗಿದೆ ಹಾಗೂ ವೆಂಕಟರಾಜ ಉಡುಪ ಎಂಬವರ ಮನೆಯೊಳಗೆ ನೀರು ನುಗ್ಗಿದೆ. ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ಬೊಳ್ಳೂರು ಪ್ರದೇಶದಲ್ಲಿ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಸುರಗಿರಿ ದೇವಸ್ಥಾನದ ಬಳಿ 5 ಎಕರೆ ಕೃಷಿ ಹಾನಿ ಸಂಭವಿಸಿದೆ ಎಂದು ಮಾಜಿ ಪಂ. ಸದಸ್ಯ ಮಯ್ಯದ್ದಿ ಪಕ್ಷಿಕೆರೆ ತಿಳಿಸಿದ್ದಾರೆ.
ಕಿಲೆಂಜೂರು, ಕಟೀಲು ಮಿತ್ತಬೈಲು ಪರಿಸರದಲ್ಲಿ ನಂದಿನಿ ನದಿ ಉಕ್ಕಿ ಹರಿಯುತ್ತಿದ್ದು, ಬಯಲು ಪ್ರದೇಶದ ಅನೇಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಹಳೆಯಂಗಡಿ ಕೊಪ್ಪಲ ಕುದ್ರು ಪ್ರದೇಶದ ಕೆಲವು ಮನೆಗಳಲ್ಲಿ ನೆರೆಯಿಂದಾಗಿ ಸಿಲುಕಿಕೊಂಡಿರುವ ಕುಟುಂಬದವರನ್ನು ಹಳೆಯಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಮಾರ್ಗದರ್ಶನದಲ್ಲಿ ಹಳೆಯಂಗಡಿ ಕಾಂಗ್ರೆಸ್ಸಿನ ನೆರೆ ರಕ್ಷಣಾ ಪಡೆ ಸದಸ್ಯರು ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ರಕ್ಷಣಾ ಪಡೆ ಸದಸ್ಯರಾದ ಚಂದ್ರಕುಮಾರ್, ಅನಿಲ್ ಕುಮಾರ್ ,ರಿತೇಶ್ ಸಾಲಿಯಾನ್ ಸಸಿಹಿತ್ಲು, ಅಬ್ದುಲ್ ಅಜೀಜ್, ದೀಪಕ್ ಕೋಟ್ಯಾನ್, ಪ್ರಶಾಂತ್ ಪೂಜಾರಿ, ಹೇಮಂತ್ ಪೂಜಾರಿ,ಕೃಷ್ಣ ಶೆಟ್ಟಿಗಾರ್, ರೂಪೇಶ್ ಸಾಲಿಯಾನ್, ಜಾಕ್ಸನ್ ಪಕ್ಷಿಕೆರೆ, ವಾಲ್ಟರ್ ಡಿಸೋಜ ಪಕ್ಷಿಕೆರೆ ಸಂತೋಷ್ ಕಾಂಚನ್, ಸೈನಾ ಡಿಸೋಜ ಹಳೆಯಂಗಡಿ ಗ್ರಾಮ ಲೆಕ್ಕಾಧಿಕಾರಿ ಮೋಹನ್, ಗ್ರಾ ಪಂ ಕಾರ್ಯದರ್ಶಿ ಶ್ರೀಶೈಲಾ, ಗ್ರಾಮ ಸಹಾಯಕರಾದ ನವೀನ್, ಪಂ. ಸಿಬ್ಬಂದಿ ಸಾವದ್ ಇದ್ದರು. ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಶ್ರೀ ಭಗವತಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ತೋಕೂರು, ಪಡುಪಣಂಬೂರು, ಪಕ್ಷಿಕೆರೆ, ಕಿನ್ನಿಗೋಳಿ, ಐಕಳ, ಪಟ್ಟೆ, ಏಳಿಂಜೆ ಬಯಲು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿದ್ದು, ಜನರು ಬವಣೆ ಪಡುವಂತಾಗಿದೆ.