ಕಾರವಾರ: ಸಮುದ್ರದ ಆರ್ಭಟಕ್ಕೆ ಲಂಗರು ಕಡಿದು ದಡ ಸೇರಿದ ಬೋಟುಗಳು
ಕಾರವಾರ, ಸೆ.21: ರವಿವಾರ ತಡರಾತ್ರಿ ಬೀಸಿದ ಭಾರೀ ಗಾಳಿ ಹಾಗೂ ಸಮುದ್ರದ ಆರ್ಭಟಕ್ಕೆ ಕಾರವಾರ ಕಡಲ ತೀರದಿಂದ ಸುಮಾರು 200 ಮೀಟರ್ ಅಂತರದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟುಗಳು ಲಂಗರು ಕಡಿದು ದಡಕ್ಕೆ ತೇಲಿ ಬಂದಿವೆ.
ಕಳೆದೆರಡು ದಿನಗಳಿಂದ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರಿಂದ ವಿವಿಧ ರಾಜ್ಯ ಹಾಗೂ ಮಂಗಳೂರು, ಮಲ್ಪೆಯಬೋಟುಗಳು ಕಾರವಾರ ಕಡಲ ತೀರದಲ್ಲಿ ಲಂಗರು ಹಾಕಿವೆ. ಲಂಗರು ಹಾಕಿದ್ದ ಮಲ್ಪೆಭಾಗದ ಮಜ್ದೂರ್ ಹಾಗೂ ಪ್ರಾವಿಡೆೆನ್ಸ್ ಹೆಸರಿನ ಬೋಟುಗಳು ಹಾಗೂ ಪಾತಿ ದೋಣಿಯೊಂದು ಗಾಳಿಯ ಅಬ್ಬರಕ್ಕೆ ದಡಕ್ಕೆ ಬಂದು ಅಪ್ಪಳಿಸಿವೆ. ನಾಡದೋಣಿ ಸಹ ದಡಕ್ಕೆ ಬಂದು ಬಿದ್ದಿದ್ದು ಹಾನಿ ಸಂಭವಿಸಿಲ್ಲ. ಯಾವುದೇ ಪ್ರಾಣಹಾನಿಯಾಗಿಲ್ಲ.
ಮೀನುಗಾರಿಕಾ ಬೋಟುಗಳು ದಡಕ್ಕೆ ತೇಲಿ ಬಂದಿದ್ದರಿಂದ ಮತ್ತೇ ಸಮುದ್ರಕ್ಕೆ ಸೇರಿಸುವುದು ಮೀನುಗಾರರಿಗೆ ಸದ್ಯದ ಮಟ್ಟಿಗೆ ಸಾಧ್ಯವಿಲ್ಲ. ತೂಫಾನ್ ವಾತಾವರಣ ಇದ್ದು ಸಮುದ್ರದ ಆರ್ಭಟವೂ ಹೆಚ್ಚಿದೆ. ಪರಿಸ್ಥಿತಿ ತಿಳಿಗೊಂಡ ಬಳಿಕ, ಬೋಟ್ ಸಮುದ್ರಕ್ಕೆ ಒಯ್ಯುವ ಪ್ರಯತ್ನ ನಡೆಯಲಿದೆ ಎಂದು ಮೀನುಗಾರರು ತಿಳಿಸಿದ್ದಾರೆ.