ಹಾನಿಗೊಂಡ ಮಟ್ಟುಗುಳ್ಳ ಕೃಷಿ ಪ್ರದೇಶಕ್ಕೆ ಉಡುಪಿ ಡಿಸಿ ಭೇಟಿ
ವಿಶೇಷ ಪ್ರಕರಣವಾಗಿ ಪರಿಗಣಿಸಲು ಪರಿಶೀಲನೆ ಭರವಸೆ
ಉಡುಪಿ, ಸೆ.23: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಧಾರಾಕಾರವಾಗಿ ಸುರಿದ ಮಳೆ ಹಾಗೂ ಅದರಿಂದುಂಟಾದ ನೆರೆಯಿಂದ ಕಟಪಾಡಿ ಮಟ್ಟು ಪ್ರದೇಶದಲ್ಲಿ ರೈತರು ಈಚೆಗಷ್ಟೇ ನಾಟಿ ಮಾಡಿದ್ದ ಮಟ್ಟುಗುಳ್ಳ ಕೃಷಿ ಸಂಪೂರ್ಣ ಹಾನಿಗೊಂಡಿದ್ದು, ಇದರಿಂದ ಮಟ್ಟುಗುಳ್ಳ ಕೃಷಿಕರು ಅಪಾರ ನಷ್ಟ ಅನುಭವಿ ಸುವಂತಾಗಿದೆ.
ಸತತ ಮಳೆಯಿಂದಾಗಿ ಮೂರು ದಿನಗಳ ಕಾಲ ಗದ್ದೆಯಲ್ಲಿ ನೀರು ನಿಂತಿದ್ದು, ಇದರಿಂದ ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆದ ಮಟ್ಟುಗುಳ್ಳ ಸಸಿ ಕೊಳೆತು ಹೋಗಿದೆ. ಫ್ಲಾಸ್ಟಿಕ್ ಮಲ್ಟಿಂಗ್ ಪದ್ಧತಿಯಲ್ಲಿ ನೆಟ್ಟು ಬೆಳೆಸಿದ ಗಿಡಗಳು ಇದೀಗ ಬಲಿತಿದ್ದು, ಕೆಲವೇ ಸಮಯಲ್ಲಿ ಪಸಲು ಕೊಡಲು ಪ್ರಾರಂಭಿಸುತ್ತಿತ್ತು. ಇದೀಗ ಸಸಿಗಳು ಗದ್ದೆಯಲ್ಲೇ ಕೊಳೆತು ಹೋಗಿದೆ. ಇದರಿಂದ ಮುಂದಿನ ಹಂತದ ನಾಟಿಗೂ ಸಸಿ ಇಲ್ಲದಂತಾಗಿದೆ. ಈ ಮೂಲಕ ಈ ಬಾರಿಯ ಮಟ್ಟುಗುಳ್ಳ ಕೃಷಿಗೆ ಭಾರೀ ಹಿನ್ನಡೆಯಾದಂತಾಗಿದೆ.
ಜಿಲ್ಲಾಧಿಕಾರಿ ಭೇಟಿ: ಸುದ್ದಿ ತಿಳಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಹಾನಿಗೊಳಗಾದ ಸ್ಥಳಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿ ದರು. ಮಟ್ಟುಗುಳ್ಳ ಕೃಷಿಕರು ಅವರಿಗೆ ಮೊನ್ನಿನ ಮಳೆಯಿಂದ ತಮಗಾದ ನಷ್ಟವನ್ನು ವಿವರಿಸಿ, ಸರಕಾರ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.
ಇಲ್ಲಿ ಗುಳ್ಳ ಕೃಷಿಕರು ಸಣ್ಣಸಣ್ಣ ಹಿಡುವಳಿದಾರರಾಗಿದ್ದು, ಇದಕ್ಕೆ ಪ್ರಾಕೃತಿಕ ವಿಕೋಪದಲ್ಲಿ ಅತೀ ಕಡಿಮೆ ಪರಿಹಾರ ಸಿಗುವ ಕಾರಣ, ತೋಟಗಾ ರಿಕಾ ಇಲಾಖೆಯ ಮೂಲಕ ಹಾನಿಯ ಸರ್ವೆ ನಡೆಸಿ, ನಷ್ಟದ ಅಂದಾಜು ಮಾಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಇವುಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸೂಕ್ತ ಪರಿಹಾರವನ್ನು ನೀಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿಯೂ ಜಿಲ್ಲಾಧಿ ಕಾರಿ ಗುಳ್ಳ ಕೃಷಿಕರಿಗೆ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಅವರು ಕೃಷಿಕರ ಪರವಾಗಿ ಮನವಿ ಅರ್ಪಿಸಿದರು.