ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ : ಮನೋಜ್ ಕೋಡಿಕೆರೆ ಸಹಿತ ಐವರ ಬಂಧನ
ಕಿಶನ್ ಹೆಗ್ಡೆ
ಹಿರಿಯಡ್ಕ, ಸೆ. 26: ಹಿರಿಯಡ್ಕ ಪೇಟೆಯಲ್ಲಿ ಹಾಡುಹಗಲೇ ನಡೆದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೋಜ್ ಕೋಡಿಕೆರೆ ಸೇರಿದಂತೆ ಐವರನ್ನು ಬಂಧಿಸಿರುವ ಪೊಲೀಸರು ಮಧ್ಯಾಹ್ನ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗಾಗಲೇ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ನಡುವೆ ಹಣಕಾಸಿನ ವಿಚಾರ ದಲ್ಲಿ ವೈಮನಸ್ಸು ಉಂಟಾಗಿದ್ದು, ಇದೇ ದ್ವೇಷದಲ್ಲಿ ಮನೋಜ್ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದನು ಎಂದು ದೂರಲಾಗಿದೆ.
ಸೆ. 24ರಂದು ಮಧ್ಯಾಹ್ನ ದಿವ್ಯರಾಜ್ ಶೆಟ್ಟಿ, ಕಿಶನ್ ಹೆಗ್ಡೆ ಹಾಗೂ ಹರಿ ಪ್ರಸಾದ್ ಶೆಟ್ಟಿ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಹೋಗಲು ಕಾರಿನಿಂದ ಇಳಿಯುತ್ತಿರುವಾಗ ಎರಡು ಕಾರಿನಲ್ಲಿ ಬಂದ 7-8 ಮಂದಿ ದುಷ್ಕರ್ಮಿಗಳು ತಲ ವಾರಿನಿಂದ ಕಡಿದು ಕಿಶನ್ ಹೆಗ್ಡೆಯನ್ನು ಕೊಲೆ ಮಾಡಿದ್ದಾರೆ. ಈ ಸಂದರ್ಭ ದಲ್ಲಿ ಹರಿಪ್ರಸಾದ್ ಶೆಟ್ಟಿ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.