ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ರಸ್ತೆ ತಡೆ, ಪ್ರತಿಭಟನೆ: ರಸ್ತೆಗಿಳಿಯದ ಬಸ್ಸುಗಳು
ಕರ್ನಾಟಕ ಬಂದ್
ಕಲಬುರಗಿ, ಸೆ.28: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತರಲು ಉದ್ದೇಶಿಸಿರುವ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಜನವಿರೋಧಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳ ಬಂದ್ ಕರೆಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಸೆಂಟ್ರಲ್ ಬಸ್ ನಿಲ್ದಾಣದ ಬಳಿ ರೈತರು, ಎಲ್ಲಾ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದವು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ಮತ್ತು ಮಸೂದೆ ಹಾಗೂ 11 ಸುಗ್ರೀವಾಜ್ಞೆಗಳು ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಿಸಾನ್ ಸಭಾ ಸೇರಿದಂತೆ 12ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಕರೆ ನೀಡಿವೆ.
ಬಳಿಕ ಸಿಪಿಎಂ ಮುಖಂಡ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಕಾವು ಎದುರಿಸುತ್ತಿರುವುದರಿಂದ ಸಾರಿಗೆ ಇಲಾಖೆ ಇಂದು ಬೆಳಗ್ಗೆನಿಂದಲ್ಲೆ ಯಾವುದೇ ಬಸ್ ಸಂಚಾರ ಆರಂಭಿಸಿಲ್ಲ.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಭಾರಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಇಂದು ಪೂರ್ವಹ್ನ 11 :30ಕ್ಕೆ ನಗರದ ನೆಹೆರೂ ಗಂಜ್ ನಗರೆಶ್ವರ ಶಾಲೆಯಿಂದ ರೈತರು ಕಾರ್ಮಿಕರು ಬೃಹತ್ ಪಾದಯಾತ್ರೆ ನಡೆಸಿ, ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ಜಗತ್ ಸರ್ಕಲ್ ನಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.