ಬಾಬರಿ ಮಸೀದಿ ದ್ವಂಸ ಪ್ರಕರಣ: ನ್ಯಾಯಾಲಯದ ತೀರ್ಪಿಗೆ ಪೇಜಾವರಶ್ರೀ ಸಂತಸ
ಉಡುಪಿ, ಸೆ.30: ಬಾಬರಿ ಮಸೀದಿ ದ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಇಂದು ನೀಡಿದ ತೀರ್ಪನ್ನು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದು, ತೀರ್ಪಿನಿಂದ ತಮಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ಧಾರ್ಮಿಕ ಹಾಗೂ ರಾಜಕೀಯ ನಾಯಕರ ಮೇಲೆ ಮಾಡುವ ಸತ್ಯಕ್ಕೆ ದೂರವಾದ ಆರೋಪಗಳಿಂದ ಒಬ್ಬರನ್ನು ಹತ್ತಿಕ್ಕುವ ಮಾತು ದೂರವಾ ಗಿದೆ. ಸತ್ಯಮೇವ ಜಯತೆ ಎಂಬ ಮಾತು ಅಯೋಧ್ಯೆ ತೀರ್ಪಿನ ಬಳಿಕ ಇಂದು ಮತ್ತೆ ಸತ್ಯವಾಗಿದೆ. ಈ ತೀರ್ಪನ್ನು ನಾವು ಸಂತೋಷದಿಂದ ಸ್ವಾಗತಿಸುತ್ತೇವೆ.
‘ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಉಳಿಗಾಲವಿಲ್ಲ’ ಎಂಬ ಮಾತು ಇಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸ್ವಾಮೀಜಿ ಇಂದಿನ ತೀರ್ಪಿನ ಕುರಿತು ಪ್ರತಿಕ್ರಿಯಿಸಿದರು.
ಐತಿಹಾಸಿಕ ತೀರ್ಪು: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಅಚಾನಕ್ ಘಟನೆಯೇ ಹೊರತು ಪೂರ್ವ ನಿಯೋಜಿತವಲ್ಲ. ಸಂಚು ಎಂದು ಸಾಬೀತು ಪಡಿಸಲು ಯಾವುದೇ ಸಾಕ್ಷಗಳು ಇಲ್ಲ ಎಂದು ಲಕ್ನೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿ ಮಾಜಿ ಉಪಪ್ರಧಾನಿ ಲಾಲ್ಕೃಷ್ಣ ಅಡ್ವಾಣಿ, ಮುರಳಿಮನೋಹರ್ ಜೋಷಿ, ಉಮಾಭಾರತಿ, ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ನಿರ್ಧೋಷಿಗ ಳೆಂದು ಘೋಷಿಸಿರುವುದು ಸತ್ಯಕ್ಕೆ ಸಂದ ಜಯ ಹಾಗೂ ಐತಿಹಾಸಿಕ ತೀರ್ಪು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.