ಉಡುಪಿ: ಎನ್ಎಚ್ಎಂ ನೌಕರರ ಮುಷ್ಕರ ಮುಂದುವರಿಕೆ
ಅ.2ರಿಂದ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ
ಉಡುಪಿ, ಸೆ. 30: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ಎಂ)ದ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಒಂಭತ್ತನೇ ದಿನವನ್ನು ಪೂರ್ಣ ಗೊಳಿಸಿರುವಂತೆ ಅದನ್ನು ತೀವ್ರಗೊಳಿಸಲು ಸಂಘ ನಿರ್ಧರಿಸಿದೆ.
ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದೊಂದಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಸಭೆ ಇಂದು ಶಿವಮೊಗ್ಗದಲ್ಲಿ ಸಂಘದ ಗೌರವಾಧ್ಯಕ್ಷರೂ ಆಗಿರುವ ಎಂಎಲ್ಸಿ ಆಯನೂರು ಮಂಜುನಾಥ್ ಇವರ ನಿರ್ದೇಶನದಡಿಯಲ್ಲಿ ಶಿವಮೊಗ್ಗದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮುಷ್ಕರ ಮುಂದುವರಿಸಲು ನಿರ್ಧರಿಸಲಾಯಿತು ಎಂದು ಸಂಘ ಉಡುಪಿ ಘಟಕದ ಅಧ್ಯಕ್ಷ ಮಂಜುನಾಥ ತಿಳಿಸಿದರು.
ಅ. 2ರಂದು ಆಯಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದರು. ಇದೂ ಫಲ ನೀಡದಿದ್ದರೆ ಮುಂದೆ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾ ಯಿತು ಎಂದವರು ನುಡಿದರು.
ರಾಜ್ಯದಲ್ಲಿ 30,000 ಹಾಗೂ ಉಡುಪಿ ಜಿಲ್ಲೆಯಲ್ಲಿ 512 ಮಂದಿ ಎನ್ಎಚ್ಎಂ ನೌಕರರು ಆರೋಗ್ಯ, ವೈದ್ಯಕೀಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಾಗಿ ಯಾವುದೇ ಸೌಲಭ್ಯಗಳಿಲ್ಲದೇ, ಕಡಿಮೆ ವೇತನಕ್ಕೆ ದುಡಿಯುತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ದುಡಿಯುವ ವೈದ್ಯರು, ಆಯುಷ್ ವೈದ್ಯರು, ಸ್ಟಾಫ್ ನರ್ಸ್ಗಳು ಹಾಗೂ ತಂತ್ರಜ್ಞರು ಇದರಲ್ಲಿದ್ದಾರೆ.
139 ಪಾಸಿಟಿವ್ ದೃಢ: ರಾಜ್ಯ ಆರೋಗ್ಯ ಇಲಾಖೆ ಇಂದು ರಾತ್ರಿ ಪ್ರಕಟಿಸಿದ ಕೋವಿಡ್ ಬುಲೆಟಿನ್ನಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 139 ಪಾಸಿಟಿವ್ ಪ್ರಕರಣಗಳಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ದೃಢಪಟ್ಟವರ ಸಂಖ್ಯೆ 17,144ಕ್ಕೇರಿದೆ. ಅಲ್ಲದೇ ದಿನದಲ್ಲಿ 187 ಮಂದಿ ಸೋಂಕಿ ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಇರ ಒಟ್ಟು ಸಂಖ್ಯೆ 14,968ಕ್ಕೇರಿದೆ.
ಒಂದು ಬಲಿ: ಅಲ್ಲದೇ ಜಿಲ್ಲೆಯಲ್ಲಿ ಇಂದಿಗೆ ಒಟ್ಟು 2029 ಸಕ್ರೀಯ ಕೋವಿಡ್ ಪ್ರಕರಣಗಳಿವೆ. ಬುಧವಾರ ಕೋವಿಡ್ಗೆ ಒಬ್ಬರು ಬಲಿಯಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಕೋವಿಡ್ನಿಂದ ವುೃತಪಟ್ಟವರ ಸಂಖ್ಯೆ 147ಕ್ಕೇರಿದೆ.
ಜಿಲ್ಲೆಯ 63 ವರ್ಷ ಪ್ರಾಯದ ವೃದ್ಧರೊಬ್ಬರು ಕೋವಿಡ್ ಸೋಂಕಿನೊಂದಿಗೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು 20ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.