ಬ್ಯಾರಿ ಭಾಷೆ, ಸಾಹಿತ್ಯಕ್ಕಾಗಿ ದಶಕಗಳ ಹಿಂದೆ ದೊಡ್ಡ ಆಂದೋಲನ ನಡೆದಿದೆ : ಜೆ. ಹುಸೈನ್
ಬ್ಯಾರಿ ಭಾಷಾ ದಿನಾಚರಣೆ -2020
ಮಂಗಳೂರು: ದ.ಕ. ಜಿಲ್ಲಾ ಅಖಿಲ ಭಾರತ ಬ್ಯಾರಿ ಪರಿಷತ್ ಮಂಗಳೂರು ಇದರ ವತಿಯಿಂದ "ಬ್ಯಾರಿ ಭಾಷಾ ದಿನಾಚರಣೆಯು ನಗರದ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷವಹಿಸಿದ್ದ ಜೆ. ಹುಸೈನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬ್ಯಾರಿ ಭಾಷೆ ಮತ್ತು ಸಾಹಿತ್ಯಕ್ಕಾಗಿ ದಶಕಗಳ ಹಿಂದೆ ದೊಡ್ಡ ಆಂದೋಲನವೇ ನಡೆದಿದೆ ಎಂದರು.
ಬ್ಯಾರಿ ಭಾಷೆಯಲ್ಲಿ ನೋಂದಣಿ ಮಾಡಿದ ಭೂ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಸ್ಮಾರ್ಟ್ ಸಿಟಿ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಅವರು, ಬ್ಯಾರಿ ಭಾಷೆಯ ಉಳಿಕೆಗೆ ಬ್ಯಾರಿ ಸಮುದಾಯದ ಬಹಳಷ್ಟು ಹೋರಾಟದ ಬಳಿಕ ಬ್ಯಾರಿ ಭಾಷೆ ಯ ಪ್ರಥಮ ನೋಂದಣಿ ಭೂ ದಾಖಲೆ ಬಿಡುಗಡೆ ಮಾಡಿರುವುದು ಶ್ಲಾಘನೀಯ. ಬ್ಯಾರಿ ಭಾಷೆ ಸಾಹಿತ್ಯ ಆಚರಣೆಗೆ ಸೀಮಿತ ಆಗಬಾರದು. ನಮ್ಮದು ಸಣ್ಣ ಸಮುದಾಯವಾಗಿದ್ದರೂ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಲು ಸಾಧ್ಯವಾಗಿದೆ. ಆದರೆ ಸಾಚಾರ್ ಸಮಿತಿಯು ವರದಿಯಲ್ಲಿ ಬ್ಯಾರಿ ಎಂದು ಉಲ್ಲೇಖ ಆಗಿಲ್ಲ. ಅದರಲ್ಲಿ ಮುಸ್ಲಿಂ ಜನಾಂಗ ಎಂದು ಉಲ್ಲೇಖ ಆಗಿದೆ ಎಂದು ಹೇಳಿದರು.
ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಅಧ್ಯಕ್ಷ ಬಶೀರ್ ಬೈಕಂಪಾಡಿ, ಹನೀಫ್, ಸಿವಿಲ್ ಸರ್ವಿಸ್ ತರಬೇತುದಾರ ಫರ್ಝಾನ ಯು.ಟಿ, ಕಾರ್ಪೋರೇಟರ್ ಅಬ್ದುಲ್ ಲತೀಫ್ ಕಂದಕ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ ಎಮ್ ಅಸ್ಲಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅ.ಭಾ. ಬ್ಯಾರಿ ಪರಿಷತ್ತಿನ ಉಪಾಧ್ಯಕ್ಷ ಯೂಸುಫ್ ವಕ್ತಾರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಬ್ದುಲ್ ಮಜೀದ್ ಸೂರಲ್ಪಾಡಿ, ಶಾಹುಲ್ ಹಮೀದ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನ ಹಿದಾಯತುಲ್ಲಾ ಮೊದಲಾದವರು ಉಪಸ್ಥಿತರಿದ್ದರು. ಗೌರವ ಸಲಹೆಗಾರ ಬಿ.ಎಮ್.ಮಮ್ತಾಝ್ ಆಲಿ ಬಹುಮಾನ ವಿತರಣೆ ಮಾಡಿದರು.
ಅ.ಭಾ.ಬ್ಯಾರಿ ಪರಿಷತ್ ನ ಉಪಾಧ್ಯಕ್ಷ ಮುಹಮ್ಮದ್ ಕುಂಜತ್ ಬೈಲ್ ನಿರ್ಣಯ ಮಂಡನೆ ಮಾಡಿದರು. ಯೂಸುಫ್ ವಕ್ತಾರ ಸ್ಪರ್ಧಾ ವಿಜೇತರ ಹೆಸರು ಘೋಷಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ, ಕೆ.ಎಸ್.ಅಬೂಬಕರ್ ಸ್ವಾಗತಿಸಿದರು. ಮುಹಮ್ಮದ್ ಶರೀಫ್ ನಿರ್ಮುಂಜೆ, ಹಾರಿಸ್ ತೋಡಾರ್ ಬ್ಯಾರಿ ಹಾಡುಗಳನ್ನು ಹಾಡಿದರು.
ಅ.ಭಾ.ಬ್ಯಾರಿ ಪರಿಷತ್ತಿನ ಉಪಾಧ್ಯಕ್ಷ ಖಾಲೀದ್ ಉಜಿರೆ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕೋಶಾಧಿಕಾರಿ ನಿಸಾರ್ ಫಕೀರ್, ಮುಹಮ್ಮದ್ ವಂದಿಸಿದರು.