ಕಾರ್ಕಳ: ಜೈನ ಸಮಾಜದಿಂದ ಸ್ವಚ್ಛತಾ ಅಭಿಯಾನ
ಕಾರ್ಕಳ, ಅ.7: ಗಾಂಧಿ ಜಯಂತಿಯ ಅಂಗವಾಗಿ ಕಾರ್ಕಳದ ಜೈನ ಸಮಾಜದ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಚರ್ತುಮುಖ ಬಸದಿ, ಬಾಹುಬಲಿ ಬೆಟ್ಟ, ಪದ್ಮಾವತಿ ದೇವಿ ಬಸದಿ, ಬೊಮ್ಮರಾಜ ಬಸದಿ, ಬಾಹುಬಲಿ ಪ್ರವಚನ ಮಂದಿರದ ಸುತ್ತಮುತ್ತಲಿನ ಪರಿಸರ, ಶ್ರವಣ ಬಸದಿ, ಆನೆಕೆರೆ ಬಸದಿ, ಅರಮನೆ ಬಸದಿ ಹಾಗೂ ಮುಕ್ತಿಧಾಮ ಪರಿಸರ ಸ್ವಚ್ಛತಾ ಕಾರ್ಯಕ್ರಮ ಅ.2ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು.
ಕರ್ನಾಟಕ ಜೈನ್ ಸ್ವಯಂಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ನೇಮಿರಾಜ ಆರಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜೈನ ಯುವಜನ ಸಂಘದ ಅಧ್ಯಕ್ಷ ಎಸ್.ಪಾರ್ಶ್ವನಾಥ ವರ್ಮ, ಕಾರ್ಕಳ ಜೈನ್ ಮಿಲನ್ ಅಧ್ಯಕ್ಷ ಅಮರ್ನಾಥ್ ಹೆಗ್ಡೆ, ಜಿನವಾಣಿ ಮಹಿಳಾ ಸಂಘದ ಅಧ್ಯಕ್ಷೆ ಕಿರಣ್ ಉದಯ್ ಇಂದ್ರ, ಯುವ ಜೈನ್ ಮಿಲನ್ ಅಧ್ಯಕ್ಷ ವೀರೇಂದ್ರ ಆರ್. ಜೈನ್, ಶ್ರೀ ಕರ್ನಾಟಕ ಜೈನ ಪುರೋಹಿತ ಸಂಘದ ಕಾರ್ಯದರ್ಶಿ ಸುರೇಶ್ ಇಂದ್ರ, ಸನ್ಮಿತ್ರ ಜೈನ್ ಅಸೋಸಿಯೇಶನ್ನ ಮಹಾವೀರ ಹೆಗ್ಡೆ, ವರ್ಧಮಾನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಶಶಿಕಲಾ ಕೆ. ಹೆಗ್ಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
25ಕ್ಕೂ ಅಧಿಕ ಸ್ವಚ್ಛತಾ ಯಂತ್ರಗಳ ಸಹಾಯದಿಂದ ನಡೆದ ಈ ಅಭಿಯಾನದಲ್ಲಿ ಊರಿನ ಶ್ರಾವಕ ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸ್ವಚ್ಛತಾ ಅಭಿಯಾನವನ್ನು ಶಿವರಾಜ್ ಜೈನ್, ವೀರಚಂದ್ರ ಜೈನ್ ಮತ್ತು ಶ್ರೇಯಾಂಸ್ ಜೈನ್ ನಿರ್ವಹಿಸಿದರು.