ಸೌಹಾರ್ದತೆಗೆ ಸಾಕ್ಷಿಯಾಗುತ್ತಿರುವ ಕೈಪುಂಜಾಲ್ ದರ್ಗಾ
ಕಾಪು : ಕೈಪುಂಜಾಲು ಸಮುದ್ರ ಕಿನಾರೆಯಲ್ಲಿ ಸೈಯದ್ ಅರಬೀ ವಲಿಯುಲ್ಲಾರವರ ದರ್ಗಾ ಸೌಹಾರ್ದತೆಯ ಕೇಂದ್ರವಾಗಿದೆ. ಈ ದರ್ಗಾ ಇರುವ ಜಾಗ ಮೊಗವೀರ ಸಮುದಾಯದ್ದು, ದರ್ಗಾದ ಸುತ್ತಲೂ ವಾಸಿಸುವವರು ಮೊಗವೀರರು. ಪ್ರತಿನಿತ್ಯ ದರ್ಗಾ ವಠಾರವನ್ನು ಸ್ವಚ್ಛಗೊಳಿಸುತ್ತಾರೆ. ಈ ಮೂಲಕ ಸೌಹಾರ್ದತೆಯ ಕೇಂದ್ರ ಬಿಂದುವಾಗಿದೆ.
ಪೊಲಿಪು ಜಾಮಿಯಾ ಮಸೀದಿಯ ಆಡಳಿತ ಸಮಿತಿಯ ಅಧೀನಕ್ಕೊಳಪಟ್ಟ ಈ ದರ್ಗಾದಲ್ಲಿ ಬುಧವಾರ ಸಫರ್ ಝಿಯಾರತ್ ನಡೆಯಿತು. ಈ ದಿನದಂದು ದಕ್ಷಿಣ ಕನ್ನಡ, ಉಡುಪಿ ಸಹಿತ ವಿವಿಧ ಜಿಲ್ಲೆಗಳಿಂದ ಬರುತ್ತಾರೆ. ಸಂಘಟಕರ ಪ್ರಕಾರ ಪ್ರತೀ ವರ್ಷ 15 ಸಾವಿರದಿಂದ 20 ಸಾವಿರಕ್ಕೂ ಅಧಿಕ ಮಂದಿ ಬರುತ್ತಾರೆ. ಆದರೆ ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸಾಂಕೇತಿಕವಾಗಿ ಝಿಯಾರತ್ ಆಚರಿಸಲಾಗುವುದು.
ಝಿಯಾರತ್ಗೆ ಕಾಪು ಪೊಲಿಪು ಜಾಮಿಯಾ ಮಸೀದಿಯ ಜಮಾತ್ ರಿಗೆ ಮಾತ್ರ ಸೀಮಿತಗೊಳಿಸಲಾಯಿತು. 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು 60 ವರ್ಷಕ್ಕೆ ಮೇಲ್ಪಟ್ಟವರಿಗೆ ಹಾಗು ಇತರ ಜಮಾತ್ ರಿಗೆ ಝಿಯಾರತ್ಗೆ ಬರಲು ಅವಕಾಶ ನೀಡಿರಲಿಲ್ಲ.
ಝಿಯಾರತ್ಗೆ ಬರುವವರಿಗೆ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದರು. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯಿತು. ದರ್ಗಾದ ಒಳಗೆ ಸೀಮಿತ ಜನರಿಗೆ ಮಾತ್ರ ಅವಕಾಶವನ್ನು ನೀಡಲಾಯಿತು.
ದರ್ಗಾ ಪರಿಸರದಲ್ಲಿರುವ ಶಾಶ್ವತ ಅಂಗಡಿಗಳ ಹೊರತುಪಡಿಸಿ ತಾತ್ಕಾಲಿಕ ಅಂಗಡಿ ಸ್ಟಾಲ್ಗಳಿಗೆ ಅವಕಾಶ ನೀಡಿರಲಿಲ್ಲ. ಸಂಜೆ 6 ಗಂಟೆಗೆ ಝಿಯಾರತ್ ಕೊನೆಗೊಳಿಸಲಾಯಿತು. ಕೋಶಾಧಿಕಾರಿ ಶೇಕ್ ನಝೀರ್, ಸದಸ್ಯರಾದ ಎಚ್.ಅಬ್ದುಲ್ಲಾ, ಅಬ್ದುಲ್ ಹಫೀಝ್, ಇಮ್ತಿಯಾಝ್ ಅಹಮದ್, ಪೊಲಿಪು ಜಾಮಿಯಾ ಮಸೀದಿಯ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಮಾಸ್ಟರ್ ಉಪಸ್ಥಿತರಿದ್ದರು.