ಕೊಡವೂರಿನಲ್ಲಿ ಭಾಮಾ ಫಿಲಾಟಲಿ ಗ್ಯಾಲರಿ ಉದ್ಘಾಟನೆ
ಉಡುಪಿ, ಅ.16: ಅಂಚೆ ಇಲಾಖೆಯ ಇತಿಹಾಸದೊಂದಿಗೆ ನಮ್ಮ ದೇಶದ ಇತಿಹಾಸ, ಆಗುಹೋಗು ಹಾಗು ಮಹತ್ವ್ವವನ್ನು ಸಾರುವ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವು ರಾಜರುಗಳ ಹವ್ಯಾಸವೆಂದೇ ಹೆಸರಾಗಿದ್ದು, ಈ ಹವ್ಯಾಸವನ್ನು ಮೈಗೂಡಿಸಿಕೊಂಡವರೆಲ್ಲರೂ ಅಭಿನಂದ ನಾರ್ಹರು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ ಚಂದರ್ ಹೇಳಿದ್ದಾರೆ.
ಭಾರತೀಯ ಅಂಚೆ ಇಲಾಖೆ ಮತ್ತು ಉಡುಪ ರತ್ನ ಪ್ರತಿಷ್ಠಾನದ ವತಿಯಿಂದ ಕೊಡವೂರಿನಲ್ಲಿ ಉಡುಪಿ ಅಂಚೆ ಇಲಾಖೆಯ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಅವರು ಪ್ರಾರಂಭಿಸಿರುವ ಭಾಮಾ ಫಿಲಾಟೆಲಿ ಗ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಅಂಚಿ ಸಪ್ತಾಹದ ಸಂದರ್ಭ ಫಿಲಾಟೆಲಿ ದಿನವಾದ ಇಂದು ಈ ಗ್ಯಾಲರಿ ಲೋಕಾರ್ಪಣೆಗೊಳ್ಳುವುದು ನಮ್ಮ ಅಂಚೆ ಇಲಾಖೆಗೆ ಹೆಮ್ಮೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ ಹರಿಶ್ಚಂದ್ರ ಮಾತನಾಡಿ ಮಕ್ಕಳಿಗೆ ಅಥವಾ ಆಸಕ್ತರಿಗೆ ಅಂಚೆ ಚೀಟಿಯ ವಿಶೇಷತೆ ಅರ್ಥಮಾಡಿಕೊಳ್ಳಲು ಅಪರೂಪದ ಈ ಫಿಲಾಟೆಲಿ ಗ್ಯಾಲರಿ ತುಂಬಾ ಉಪಯುಕ್ತವಾಗಿದೆ ಎಂದರು.
ಪ್ರಸಿದ್ಧ ಅಂಚೆಚೀಟಿ ಸಂಗ್ರಾಹಕ ಸಂದೀಪ್ ಕುಮಾರ್ ಅವರನ್ನು ಫಿಲಾಟಲಿ ದಿನದ ಪ್ರಯುಕ್ತ ಅಭಿನಂದಿಸಲಾಯಿತು. ಅಂಚೆ ಉಪ ಅಧೀಕ್ಷಕ ಧನಂಜಯ ಆಚಾರ್, ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಮೆಮೋರಿಯಲ್ ಗ್ಯಾಲರಿ ವ್ಯವಸ್ಥೆ ಮೇಲ್ವಿಚಾರಕ ಜಯಪ್ರಕಾಶ್ ರಾವ್, ಶಂಕರನಾ ರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.,ಬ್ರಾಹ್ಮಣ ಮಹಾಸಭಾ ಕೊಡವೂರು ವಲಯದ ಅಧ್ಯಕ್ಷ ಕೆ. ನಾರಾಯಣ ಬಲ್ಲಾಳ್, ಕಟ್ಟಡ ನಿರ್ಮಾಣ ಅಭಿಯಂತರ ವಿಶ್ವನಾಥ್ ಭಟ್, ರಾಮಾಂಜಿ ಉಪಸ್ಥಿತರಿದ್ದರು.
ಪೂರ್ಣಿಮಾ ಜನಾರ್ಧನ್ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ನರಸಿಂಹ ನಾಯಕ್ ವಂದಿಸಿ, ಜನಾರ್ದನ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.