ಹರೀಶ್ ಬಂಗೇರ ಪ್ರಕರಣ: ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ಉಡುಪಿ, ಅ.17: ಸೌದಿ ದೊರೆ ಹಾಗೂ ಮಕ್ಕಾ ಮಸೀದಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದಡಿ ಸೌದಿಯಲ್ಲಿ ಬಂಧಿತರಾದ ಕೋಟೇಶ್ವರದ ಬೀಜಾಡಿ ಗ್ರಾಮದ ಹರೀಶ್ ಬಂಗೇರ(32) ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ಸೃಷ್ಠಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಉಡುಪಿ ಸೆನ್ ಪೊಲೀಸರು ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ಉಡುಪಿ ಎಸ್ಪಿ ವಿಷ್ಣುವರ್ದನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರೀಶ್ ಬಂಗೇರರ ಪತ್ನಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಸೆನ್ ಪೊಲೀಸರು, ಮೂಡುಬಿದಿರೆಯ ಸಹೋದರರಾದ ಅಬ್ದುಲ್ ಹುಯೇಸ್ ಹಾಗೂ ಅಬ್ದುಲ್ ತುವೇಸ್ ಕಳೆದ ಜೂನ್ ತಿಂಗಳಲ್ಲಿ ಬಂಧಿಸಿದ್ದಾರೆ. ಇದೀಗ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದರು.
ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗಳಿಗೂ ಸಲ್ಲಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ತಾಂತ್ರಿಕ ಮಾಹಿತಿ ಮತ್ತು ಆರೋಪಿಗಳೇ ಈ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಅಮಾಯಕ ಹರೀಶ್ ಬಂಗೇರರನ್ನು ಸೌದಿಯ ಜೈಲಿನಿಂದ ಬಿಡು ಗಡೆಗೊಳಿಸಿ ಕರೆ ತರಲು ಸರಕಾರದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡ ಲಾಗುವುದು ಎಂದು ಅವರು ಹೇಳಿದರು.