ತ್ಯಾಜ್ಯ ಮಿಶ್ರಿತ ಕುಡಿಯುವ ನೀರು: ಕೊಂಚಾಡಿಯಲ್ಲಿ ಪ್ರತಿಭಟನಾ ಸಭೆ
ಮಂಗಳೂರು, ಅ.19: ಯೆಯ್ಯಾಡಿ ಕೊಂಚಾಡಿಯಲ್ಲಿ ಖಾಸಗಿ ವಸತಿ ಸಮುಚ್ಚಯದ ಇಂಗು ಗುಂಡಿ ಭರ್ತಿಯಾಗಿ ಅದರಿಂದ ಹೊರಬರುತ್ತಿರುವ ತ್ಯಾಜ್ಯ ನೀರು ಕುಡಿಯುವ ನೀರಿನೊಂದಿಗೆ ಸೇರಿ ಜನರ ಅರೋಗ್ಯದ-ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಕಳೆದ 3 ವರ್ಷಗಳಿಂದ ದೂರು ನೀಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಗರ ಆಡಳಿತ ಹಾಗೂ ಜನಪ್ರತಿನಿದಿನಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ರವಿವಾರ ಪ್ರತಿಭಟನೆ ಸಭೆ ನಡೆಸಿದರು.
ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದರು.
ರೈತ ಮುಖಂಡರಾದ ಯಾದವ ಶೆಟ್ಟಿ, ಸಿಪಿಎಂನ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ, ದಲಿತ ಹಕ್ಕುಗಳ ಸಮಿತಿಯ ತಿಮ್ಮಯ ಕೊಂಚಾಡಿ, ಕಟ್ಟಡ ಕಾರ್ಮಿಕ ಸಂಘಟನೆಯ ರವಿಚಂದ್ರ ಕೆ, ಉಮೇಶ್ ಕೊಪ್ಪಲಕಾಡು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ದಯಾನಂದ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಸಿಪಿಎಂ ಘಟಕ ಕಾರ್ಯದರ್ಶಿ ದಯಾನಂದ ಕೊಪ್ಪಲಕಾಡು ಮತ್ತು ಚಂದ್ರಹಾಸ್ ಕೊಂಚಾಡಿ ಉಪಸ್ಥಿತರಿದ್ದರು.
ಶಶಿಕುಮಾರ್ ಗುಂಡಳಿಕೆ ಸ್ವಾಗತಿಸಿದರು. ಡಿವೈಎಫ್ ಐ ಮುಖಂಡ ನವೀನ್ ಬೊಲ್ಪುಗುಡ್ಡೆ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರವೀಣ್ ಕೊಂಚಾಡಿ ವಂದಿಸಿದರು.