ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ನಲ್ಲಿ ‘ಆತ್ಮಸ್ಥೈರ್ಯ’ ಕಾರ್ಯಕ್ರಮ
ಮಂಗಳೂರು, ಅ.19: ಕೋವಿಡ್-19ರ ಸಮಯದಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ವಿನೂತನ ಕಾರ್ಯಕ್ರಮವನ್ನು ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ನಲ್ಲಿ ಆಯೋಜಿಸಲಾಯಿತು.
ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ನಿಂದ ಕೋವಿಡ್-19ನಿಂದ ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದೆಂಬ ಉದ್ದೇಶದೊಂದಿಗೆ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದೆ. ಪೂರ್ವ ಪ್ರಾಥಮಿಕ ಪುನರಾರಂಭದ ಬಗ್ಗೆ ವಿಶ್ವದಾದ್ಯಂತ ಇನ್ನು ಚಿಂತನೆ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಒಂದು ಹೆಚ್ಚೆ ಮುಂದೆ ಹೋಗಿ ಮಕ್ಕಳ ಹಿತದೃಷ್ಟಿಯಿಂದ ಭಾಷಾಭಿವೃದ್ಧಿ, ತಾರ್ಕಿಕ ಚಿಂತನೆ, ಸೃಜನಶೀಲತೆ ಮತ್ತು ಯೋಚಿಸುವ ವಿಧಾನ, ವಿನೋದ ಮತ್ತು ಕಲಿಕೆಯನ್ನು ಸಂಯೋಜಿಸುವ ಸಂವಾದಾತ್ಮಕ ವೇದಿಕೆಯನ್ನು ಒದಗಿಸುವ ಗುರಿ ಹಾಕಿಕೊಂಡಿದೆ.
ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ನ ಆಡಳಿತ ಮಂಡಳಿ ಸದಸ್ಯ ಹಾಗೂ ಶಕ್ತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಕೆ.ಸಿ ನಾಕ್ ಅವರ ಮಾರ್ಗ ದರ್ಶನದಲ್ಲಿ ‘ಗ್ಯಾಜೆಟ್ ಫ್ರೀ ಆಕ್ಟಿವಿಟಿ ಕಿಟ್ಸ್’ ಮೂಲಕ ಶಿಕ್ಷಣವನ್ನು ಸುಗಮಗೊಳಿಸುವ ನವೀನ ಹಾಗೂ ಹೊಸ ಚಿಂತನೆಯನ್ನು ಹೊರ ತಂದಿದೆ.
ಈ ಹಿನ್ನೆಲೆಯಲ್ಲಿ ಕೆಲವು ಚಟುವಟಿಕೆಗಳಿಗೆ ಕಿಟ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಕಲಿಕೆಗೆ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ವಿನ್ಯಾಸಗೊಳಿಸಿರುವ ಕಿಟ್ ವಿದ್ಯಾರ್ಥಿ ಸ್ನೇಹಿಯಾಗಿವೆ. ಶಿಕ್ಷಕರು ವೈಯಕ್ತಿಕವಾಗಿ ಎಲ್ಲ ರೀತಿಯಲ್ಲಿ ಸೃಜನಶೀಲರಾಗಿದ್ದಾರೆ. ಮತ್ತು ಅವರ ಭಾವನೆಗಳನ್ನು ಕಿಟ್ ರೂಪದಲ್ಲಿ ಹೊರತಂದಿರುವುದು ವಿಶೇಷವಾಗಿದೆ.
ಸಾಂಕ್ರಾಮಿಕ ರೋಗದ ಮಧ್ಯೆ ಚಟುವಟಿಕೆಯ ಕಿಟ್ಗಳನ್ನು ಅತ್ಯಂತ ಮುನ್ನೆಚ್ಚರಿಕೆಯೊಂದಿಗೆ ಮತ್ತು ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಪ್ರತಿ ತಿಂಗಳ ಮೊದಲ ವಾರದಲ್ಲಿ ವಿದ್ಯಾರ್ಥಿಯ ಮನೆಗೆ ತಲುಪಿಸಲಾಗುತ್ತಿದೆ. ವಿದ್ಯಾರ್ಥಿಯು ಶೈಕ್ಷಣಿಕವಾಗಿ ಚಟುವಟಿಕೆಯಿಂದಿರಲು ಈ ಕಿಟ್ ಪೂರಕವಾಗಲಿದೆ. ಸಂಸ್ಥೆಯು ವಾರಕ್ಕೊಮ್ಮೆ ಆನ್ಲೈನ್ನಲ್ಲಿ ಪೋಷಕರೊಂದಿಗೆ ಸಂವಾದಾತ್ಮಕ ಅವಧಿಗಳನ್ನು ನಡೆಸಲಿದೆ. ಗ್ಯಾಜೆಟ್ ಫ್ರೀ-ಆಕ್ಟಿವಿಟಿ ಕಿಟ್ಗೆ ಪೋಷಕರೆಲ್ಲರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಕಿಟ್ಗಳು ವಿದ್ಯಾರ್ಥಿಗಳನ್ನು ಚಟುವಟಿಕೆಯಲ್ಲಿಡಲು ಸಹಕಾರಿಯಾಗಲಿದೆ. ಈ ಎಲ್ಲ ಚಟುವಟಿಕೆಗಳಿಗೆ ಶ್ರೀ ಗೋಪಾಲಕೃಷ್ಣ ಪ್ರೀ-ಸ್ಕೂಲ್ನ ಸಂಚಾಲಕಿ ನೀಮಾ ಸಕ್ಸೇನಾ ನೇತೃತ್ವ ವಹಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.