ಟೆಂಪೊ- ಬೈಕ್ ಮಧ್ಯೆ ಅಪಘಾತ: ಮಗು ಮೃತ್ಯು
ಮಣಿಪಾಲ, ಅ.19: ಟೆಂಪೊವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಪರ್ಕಳ-ಬಡಗಬೆಟ್ಟು ರಸ್ತೆಯ ಪಾಂಚಜನ್ಯ ಅಪಾರ್ಟ್ಮೆಂಟ್ ಬಳಿ ಅ.18ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕುಕ್ಕುಂದೂರು ಅಯ್ಯಪ್ಪ ನಗರದ ಅರುಣ್ ಕುಮಾರ್ ಎಂಬವರ ಮಗಳು ಮಾನ್ವಿ(4) ಎಂದು ಗುರುತಿಸಲಾಗಿದೆ. ಮಗುವಿನ ಮಾವ, ಬೈಕ್ ಸವಾರ 80ಬಡಗುಬೆಟ್ಟು ಗ್ರಾಮದ ಕುಕ್ಕುದಕಟ್ಟೆ ನಿವಾಸಿ ರತನ್ ಕುಮಾರ್ ಎಂಬವರು ಗಾಯಗೊಂಡಿದ್ದಾರೆ.
ರತನ್ ಕುಮಾರ್, ತನ್ನ ಅಕ್ಕನ ಮಗು ಮಾನ್ವಿಯನ್ನು ತನ್ನ ಪಲ್ಸರ್ ಬೈಕಿನಲ್ಲಿ ಕುಕ್ಕುದಕಟ್ಟೆಯಲ್ಲಿರುವ ಮನೆಯಿಂದ ಆಕೆಯ ಮನೆಗೆ ಕರೆದುಕೊಂಡು ಹೋಗುತ್ತಿದ್ದರೆನ್ನಲಾಗಿದೆ. ಈ ವೇಳೆ ಬಡಗುಬೆಟ್ಟು ಕಡೆಯಿಂದ ಪರ್ಕಳ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ 407 ಟೆಂಪೊ, ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಮಗುವನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.