ಹಿರಿಯಡಕ: ಅಯೋಡಿನ್ ಅರಿವು ಕಾರ್ಯಕ್ರಮ
ಉಡುಪಿ, ಅ.20: ವಿಶ್ವ ಅಯೋಡಿನ್ ದಿನಾಚರಣೆಯ ಅಂಗವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಪಿಜಿಡಿಹೆಚ್ಪಿಇ ವಿಭಾಗ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡಕ ಇವರ ಸಂಯುಕ್ತ ಆಶ್ರಯದಲ್ಲಿ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇಂದು ಮುಂಡುಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ, ಅಯೋಡಿನ್ಯುಕ್ತ ಉಪ್ಪು, ಮಕ್ಕಳ ಮತ್ತು ಕುಟುಂಬದ ಆರೋಗ್ಯ ಸಂರಕ್ಷಕ ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯಡಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತ್ಯಶಂಕರ್ ಮಾತನಾಡಿ, ಎಲ್ಲಾ ವಯಸ್ಸಿನಲ್ಲೂ ಕೂಡ ಅಯೋಡಿನ್ ದೇಹಕ್ಕೆ ಅತ್ಯಗತ್ಯ. ಇದೊಂದು ಸೂಕ್ಷ್ಮ ಪೋಷಕಾಂಶ ಎಂದು ತಿಳಿಸಿದರು.
ಕರಪತ್ರ ಬಿಡುಗಡೆ ಮಾಡಿದ ಬೆಂಗಳೂರು ಪಿಜಿಡಿಹೆಚ್ಪಿಇ ವಿಭಾಗದ ಉಪನ್ಯಾಸಕ ತನ್ವೀರ್ ಅಹಮ್ಮದ್ ಖಾನ್ ಮಾತನಾಡಿ, ಅಯೋಡಿನ್ಯುಕ್ತ ಉಪ್ಪನ್ನು ಬಳಸಿ ಅಯೋಡಿನ್ ಕೊರತೆಯಿಂದ ಉಂಟಾಗುವ ದುಷ್ಪರಿಣಾಮ ವನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಾಬಾಯಿ ಅಯೋಡಿನ್ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆ ಮುಖ್ಯೋಪಾಧ್ಯಾಯ ಉಮೇಶ್ ನಾಯಕ್ ಹಾಗೂ ತಾಪಂ ಸದಸ್ಯ ಸುಭಾಷ್ ಉಪಸ್ಥಿತರಿದ್ದರು. ಚಂದ್ರಕಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಸಹಾಯಕಿ ಅರ್ಚನಾ ವಂದಿಸಿದರು.