ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ; ಅ.22ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ: ರಘುಪತಿ ಭಟ್
ಉಡುಪಿ, ಅ.21: ಉಡುಪಿ ಜಿಲ್ಲಾಸ್ಪತ್ರೆಯನ್ನು 250 ಬೆಡ್ಗಳ ಆಸ್ಪತ್ರೆ ಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯು ಅ.22ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಳ್ಳಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿ ನೀಡಿದ ಭರವಸೆಯಂತೆ ಹಣಕಾಸು ಇಲಾಖೆ ಈ ಯೋಜನೆಗೆ ಒಪ್ಪಿಗೆ ನೀಡಿದೆ. ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 115 ಕೋಟಿ ರೂ. ಮತ್ತು 250 ಬೆಡ್ಗಳಿಗೆ ಬೇಕಾಗುವ ಸಿಬ್ಬಂದಿಗಳಿಗೆ ಒಪ್ಪಿಗೆ ನೀಡಲು ಸಚಿವ ಸಂಪುಟಕ್ಕೆ ಮಂಡನೆ ಮಾಡ ಲಾಗಿದೆ ಎಂದು ಅವರು ಹೇಳಿಕೆ ಯಲ್ಲಿ ತಿಳಿಸಿದ್ದಾರೆ.
ಉಡುಪಿ ಜನತೆಯ 23 ವರ್ಷಗಳ ಬಹಳ ಮುಖ್ಯವಾದ ಬೇಡಿಕೆಗೆ ಸ್ಪಂದಿಸಿದ ಮತ್ತು ಕೊರೋನಾದಂತಹ ಆರ್ಥಿಕ ಸಂಕಷ್ಟ ಸಮಯದಲ್ಲೂ ದೊಡ್ಡ ಬಜೆಟ್ನ ಯೋಜನೆಗೆ ಮಂಜೂರಾತಿ ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಉಡುಪಿಯ ಸಮಸ್ತ ಜನತೆಯ ಪರವಾಗಿ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.