ಮಾಜಿ ಶಾಸಕ ಮೊಯ್ದಿನ್ ಬಾವಗೆ ಕೊಲೆ ಬೆದರಿಕೆ
ಸುಂಕದಕಟ್ಟೆ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡಿದ್ದ ಬಾವ
ಮಂಗಳೂರು, ಅ.21: ಸುಂಕದಕಟ್ಟೆಯ ದೇವಸ್ಥಾನವೊಂದರ ಕೊಪ್ಪರಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಿದ್ದು, ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಂಕದಕಟ್ಟೆಯ ದೇವಸ್ಥಾನ ಆಡಳಿತ ಮಂಡಳಿಯ ಆಮಂತ್ರಣದಂತೆ ಮೊಯ್ದಿನ್ ಬಾವ ದೇವಾಲಯಕ್ಕೆ ತೆರಳಿ ಕೊಪ್ಪರಿಗೆಗೆ ಅಕ್ಕಿ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದರ ಬೆನ್ನಲ್ಲೇ ಮುಂಬೈನಿಂದ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾನೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸುರತ್ಕಲ್ ಠಾಣೆಗೆ ಬಾವ ದೂರು ನೀಡಿದ್ದಾರೆ.
ಈ ಕುರಿತು ‘ವಾರ್ತಾಭಾರತಿ’ ಜೊತೆ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವ, ಪ್ರತಿವರ್ಷವೂ ನವರಾತ್ರಿ ಉತ್ಸವದ ಸಂದರ್ಭ ಸುಂಕದಕಟ್ಟೆಯ ದೇವಾಲಯದ ಆಡಳಿತ ಮಂಡಳಿಯವರು ನನಗೆ ಆಮಂತ್ರಣ ನೀಡುತ್ತಾರೆ. ಅದರಂತೆ ಈ ವರ್ಷವೂ ಆಮಂತ್ರಣ ನೀಡಿದ್ದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದೆ. ಕೊಪ್ಪರಿಗೆಗೆ ಅಕ್ಕಿ ಹಾಕುವ ಕಾರ್ಯಕ್ರಮ ನೆರವೇರಿಸುವಂತೆ ನನ್ನಲ್ಲಿ ಮನವಿ ಮಾಡಿದ್ದು, ಜಾತ್ಯತೀತ ನೆಲೆಗಟ್ಟಿನಲ್ಲಿ ಈ ಕಾರ್ಯದಲ್ಲಿ ಭಾಗಿಯಾಗಿದ್ದೆ. ಅದನ್ನೇ ಮುಂದಿಟ್ಟುಕೊಂಡು ಜೀವ ಬೆದರಿಕೆಯೊಡ್ಡುವಂಥ ಕೃತ್ಯ ನಡೆಸಿರುವುದು ಸಲ್ಲದು ಎಂದು ತಿಳಿಸಿದ್ದಾರೆ.