ಹಿರಿಯಡ್ಕ ಗೋಪಾಲ ರಾಯರಿಗೆ ನುಡಿನಮನ
ಮಂಗಳೂರು, ಅ. 22: ಯಕ್ಷಗಾನದ ಪರಂಪರೆಯಲ್ಲಿ ಸಾರ್ವಕಾಲಿಕವಾಗಿ ನೆನಪಿಸಿಕೊಳ್ಳುವ ಹಿರಿಯ ವ್ಯಕ್ತಿಗಳಲ್ಲಿ ಹಿರಿಯಡ್ಕ ಗೋಪಾಲ ರಾಯರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರು ಶತಮಾನ ಕಂಡ ಸಾರ್ಥಕ ಜೀವಿ. ಮದ್ದಳೆಯ ಮಾಂತ್ರಿಕ ಎಂಬ ಹೆಸರಿನ ಅನ್ವರ್ಥವಾಗಿ ಬದುಕಿದವರು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ.
ಇತ್ತೀಚೆಗೆ ನಿಧನರಾದ 101 ವರ್ಷದ ಹಿರಿಯ ಮದ್ದಳೆಗಾರ ಹಿರಿಯಡ್ಕ ಗೋಪಾಲ ರಾವ್ ಅವರ ಸ್ಮರಣಾರ್ಥ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಪ್ರಸಂಗ ಕರ್ತ ನಿತ್ಯಾನಂದ ಕಾರಂತ ಪೊಳಲಿ, ಯಕ್ಷಗಾನ ಕಲಾವಿದ ಪ್ರೊ. ಜಿ.ಕೆ. ಭಟ್ ಸೇರಾಜೆ, ಶ್ರೀ ಕೃಷ್ಣ ಯಕ್ಷ ಸಭಾದ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ತಾರಾನಾಥ ಹೊಳ್ಳ ನುಡಿನಮನ ಸಲ್ಲಿಸಿದರು.