ಕೇರಳ ಮುಸ್ಲಿಮ್ ಜಮಾಅತ್ ನಾಯಕರೊಂದಿಗೆ ಶಾಫಿ ಸಅದಿ ಸಮಾಲೋಚನೆ
ಮಂಗಳೂರು : ಕರ್ನಾಟಕ ರಾಜ್ಯ ಮುಸ್ಲಿಮ್ ಜಮಾಅತ್ ಪ್ರ.ಕಾರ್ಯದರ್ಶಿ ಹಾಗೂ ರಾಜ್ಯ ವಖ್ಫ್ ಮಂಡಳಿಯ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ ಇಂದು ಕಲ್ಲಿಕೋಟೆಯ ಕಾರಂದೂರು ಮರ್ಕಝ್ ನಲ್ಲಿ ಕೇರಳ ಮುಸ್ಲಿಮ್ ಜಮಾಅತ್ ನಾಯಕರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.
ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಹಾಗೂ ಹೆಣ್ಮಕ್ಕಳ ವಿವಾಹ ಪ್ರಾಯದ ಮಿತಿಯನ್ನು ಹೆಚ್ಚಿಸುವ ಸರಕಾರದ ಪ್ರಸ್ತಾಪ ಮುಂತಾದ ಅತ್ಯಂತ ಮಹತ್ವದ ಪಚಲಿತ ವಿಚಾರಗಳ ಕುರಿತು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಸಮ್ಮುಖದಲ್ಲಿ ಸಮಾಲೋಚಿಸಲಾಯಿತು.
ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಮೊಹಲ್ಲಾಗಳನ್ನು ಬಲಿಷ್ಠಗೊಳಿಸಲು ಬೇಕಾದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಉಭಯ ರಾಜ್ಯಗಳ ಮುಸ್ಲಿಮ್ ಜಮಾಅತ್ ನಾಯಕರು ಚರ್ಚಿಸಿದರು.
ಸಭೆಯಲ್ಲಿ ಕೇರಳ ಮುಸ್ಲಿಮ್ ಜಮಾಅತ್ ನಾಯಕರಾದ ಪೇರೋಡು ಅಬ್ದುರ್ರಹ್ಮಾನ್ ಸಖಾಫಿ, ವಂಡೂರು ಅಬ್ದುರ್ರಹ್ಮಾನ್ ಫೈಝಿ, ಅಲಿ ಅಬ್ದುಲ್ಲಾ, ಅಬ್ದುಲ್ ಮಜೀದ್ ಕಕ್ಕಾಡ್ ಮುಂತಾದವರು ಉಪಸ್ಥಿತರಿದ್ದರು.