ಅ.26ರಂದು ಕಿದಿಯೂರು ಯಕ್ಷ ಆರಾಧನಾ ಟ್ರಸ್ಟ್ ಉದ್ಘಾಟನೆ
ಉಡುಪಿ, ಅ.24: ಕಿದಿಯೂರು ಯಕ್ಷ ಆರಾಧನಾ ಟ್ರಸ್ಟ್ ಇದರ ಉದ್ಘಾಟನೆ ಸಮಾರಂಭವು ಅ.26ರಂದು ಸಂಜೆ 5ಗಂಟೆಗೆ ಕಿದಿಯೂರಿನ ಶ್ರೀ ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಜೆ.ಗಣೇಶ್ ಆಚಾರ್ಯ, ಟ್ರಸ್ಟ್ನ್ನು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಉದ್ಘಾಟಿಸಲಿರುವರು. ಅಂಬಲಪಾಡಿ ದೇವಳದ ಧರ್ಮ ದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್, ಸಮೂಹದ ನಿರ್ದೇಶಕ ಪ್ರೊ.ಉದ್ಯಾವರ ಮಾಧವ ಆಚಾರ್ಯ ಶುಭಾಶಂಸನೆ ನೀಡಲಿರುವರು ಎಂದರು.
ಯಕ್ಷಗಾನದ ಮೂಲ ಸ್ವರೂಪ ಉಳಿಸುವುದು, ಪ್ರಸಿದ್ದ ಅರ್ಥಧಾರಿಗಳ ಕೂಡುವಿಕೆಯ ತಾಳಮದ್ದಲೆ, ಯಕ್ಷಗಾನ ಗಾನ-ವೈಭವ, ಯಕ್ಷ ನೃತ್ಯ ರೂಪಕ ಗಳನ್ನು ನಿರ್ದೇಶಿಸುವುದು, ಆಸಕ್ತರಿಗೆ ಭಾಗವತಿಕೆ, ಮದ್ದಲೆ, ಚೆಂಡೆ, ನೃತ್ಯ ಕಲಿಸುವುದು, ವೇಷಗಾರಿಕೆ, ಮುಖವರ್ಣಿಕಾ ಕಮ್ಮಟ ಗಳನ್ನು ಏರ್ಪಡಿಸುವುದು ಸೇರಿದಂತೆ ವಿವಿಧ ಉದ್ದೇಶಗಳನ್ನು ಟ್ರಸ್ಟ್ ಹೊಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಕೆ.ಜೆ.ಕೃಷ್ಣ ಆಚಾರ್ಯ, ಕೆ.ಜೆ.ಸುಧೀಂದ್ರ, ಜನಾರ್ಧನ ಆಚಾರ್ಯ ಕಾಪು, ವೆಂಕಟೇಶ ಆಚಾರ್ಯ ಕುತ್ಪಾಡಿ, ವಿಶ್ವನಾಥ ಆಚಾರ್ಯ ಕಿದಿಯೂರು ಉಪಸ್ಥಿತರಿದ್ದರು.