ಕಾಪುವಿನಲ್ಲಿ ಪ್ರವಾದಿ ಮುಹಮ್ಮದ್ ಜೀವನ ಸಂದೇಶ
ಕಾಪು : ಪ್ರವಾದಿ ಸಾರಿದ ಮಾನವ ಧರ್ಮ ಶ್ರೇಷ್ಠ ಧರ್ಮ. ಧರ್ಮ ಹುಟ್ಟಿಸಿದ ನಾವೇ ಸ್ವಾರ್ಥ ಹಾಗೂ ಅಸ್ಮಿತೆಗೋಸ್ಕರ ಅದನ್ನಿಂದು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಅಭಿಪ್ರಾಯಪಟ್ಟರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಸಮಿತಿ ಕಾಪು ಶಾಂಭವಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾನವತೆಯ ಪ್ರತಿಪಾದಕ ಪ್ರವಾದಿ ಮಹಮ್ಮದ್ ಜೀವನ ಮತ್ತು ಸಂದೇಶ ಸಭೆಯಲ್ಲಿ ಮಾತನಾಡಿದರು.
ಸಮಾಜದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಅದೇ ಸಂದೇಶವನ್ನು ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ಸಾರಿದ್ದಾರೆ. ಸ್ತ್ರೀಯರ ಮೇಲಿನ ಶೋಷಣೆ ನಿಂತಾಗ ಅ ಧರ್ಮ ಶ್ರೇಷ್ಠವಾಗುತ್ತದೆ ಎಂದು ವಿವರಿಸಿದರು. ಮಂಗಳೂರಿನ ಶಾಂತಿಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ, ಜಗತ್ತಿನ ಯಾವೊಬ್ಬ ದಾರ್ಶನಿಕ, ಮಹಾಪುರುಷರು ದೇವರನ್ನು ರಕ್ಷಿಸಬೇಕಾದ ಕೆಲಸವನ್ನು ಪ್ರತಿಪಾದಿ ಸದೇ ಮನುಷ್ಯತ್ವದ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆ. ದಾರ್ಶನಿಕರು, ಮಹಾಪುರುಷರು, ಧಾರ್ಮಿಕ ಆಚಾರ್ಯರನ್ನಿಂದು ಧರ್ಮ, ಜಾತಿ ಮತ್ತು ವರ್ಗಕ್ಕೆ ಸೀಮಿತಗೊಳಿಸುವ ಹುನ್ನಾರಗಳು ನಡೆಯುತ್ತಿದೆ. ಜಗತ್ತಿನ ಅಗ್ರ ರಾಷ್ಟ್ರದಲ್ಲಿಯೂ ಕೇವಲ ಅಧಿಕಾರದ ಆಸೆಗಾಗಿ ಮನುಷ್ಯತ್ವ ವನ್ನು ಮರೆಯುವ ಪ್ರಯತ್ನಗಳಾಗುತ್ತಿವೆ ಎಂದರು. ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಇದ್ರೀಸ್ ವಿಷಯ ಮಂಡಿಸಿದರು.
ಉಳಿಯಾರಗೋಳಿ ದಂಡತೀರ್ಥ ಪದವಿ ಪೂರ್ವ ಕಾಲೇಜು ನಿಕಟಪೂರ್ವ ಪ್ರಾಂಶುಪಾಲ ನೀಲಾನಂದ ನಾಯ್ಕಾ ಮಾತನಾಡಿದರು. ನಿವೃತ್ತ ಶಿಕ್ಷಕ ನಿರ್ಮಲಕುಮಾರ್ ಹೆಗ್ಡೆ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಅನಿಸಿಕೆ ವ್ಯಕ್ತಪಡಿಸಿದರು.
ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೌಲಾ ಉಪಸ್ಥಿತರಿದ್ದರು. ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಸಮಿತಿ ಅಧ್ಯಕ್ಷ ಶಭೀ ಅಹಮದ್ ಕಾಝಿ ಸ್ವಾಗತಿಸಿದರು. ಕೊಂಬಗುಡ್ಡೆ ಜಾಮಿಯಾ ಮಸೀದಿ ಧರ್ಮಗುರು ಮಹಮ್ಮದ್ ಪರ್ವೇಜ್ ಆಲಂ ಕುರ್ ಆನ್ ಪಠಿಸಿದರು. ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಸದಸ್ಯ ಅನ್ವರ್ ಆಲಿ ಕಾಪು ಕಾರ್ಯಕ್ರಮ ನಿರೂಪಿಸಿದರು. ಕಾಪು ತಾಲೂಕು ಸಮಿತಿ ಕೋಶಾಧಿಕಾರಿ ಮಹಮ್ಮದ್ ಇಕ್ಬಾಲ್ ವಂದಿಸಿದರು.
ಮಾನವತೆಯ ಪ್ರತಿಪಾದಕ ಪ್ರವಾದಿ ಮಹಮ್ಮದ್ ಜೀವನ ಮತ್ತು ಸಂದೇಶ ಸಭೆಯಲ್ಲಿ ಮಹಮ್ಮದ್ ಕುಂಞ, ಡಾ. ವಿನ್ಸೆಂಟ್ ಆಳ್ವ, ಮಹಮ್ಮದ್ ಇದ್ರೀಸ್, ನೀಲಾನಂದ ನಾಯ್ಕೆ, ಶಭೀ ಅಹಮದ್ ಕಾಝಿ, ಮೊಹಮ್ಮದ್ ಮೌಲಾ ಪಾಲ್ಗೊಂಡಿದ್ದರು.