ಹಲ್ಲೆಗೊಳಗಾಗಿ ರಕ್ಷಿಸಲ್ಪಟ್ಟ ಮಹಿಳೆ ಕುಟುಂಬದ ತೆಕ್ಕೆಗೆ
ಉಡುಪಿ ಅ.26: ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಚಿನ್ನ ಹಾಗೂ ನಗದು ಕಳೆದುಕೊಂಡು ಹಲ್ಲೆಗೊಳಗಾಗಿ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟ ಜಲಜ ಆಚಾರ್ಯ(50) ಎಂಬವರ ಸಂಬಂಧಿಕರು ಪತ್ತೆಯಾಗಿದ್ದು, ಇಂದು ಅವರನ್ನು ಇಲಾಖೆಯ ಮುಖಾಂತರ ಕುಟುಂಬಕ್ಕೆ ಒಪ್ಪಿಸಲಾಗಿದೆ.
ಮಾನಸಿಕವಾಗಿ ನೊಂದಿದ್ದ ಮಹಿಳೆ, ಮನೆಯಲ್ಲಿ ನಿಲ್ಲಲು ಹೆದರಿ ಮನೆ ಯಿಂದ ಹೊರಗಡೆ ಬಂದಿದ್ದಾರೆ. ಈ ವೇಳೆ ದುಷ್ಕರ್ಮಿಯೋರ್ವ ಮಹಿಳೆಯ ಕಿವಿಯಲ್ಲಿದ್ದ ಚಿನ್ನದ ಓಲೆ, ನಗದು ಹಾಗೂ ಮೊಬೈಲ್ ದೋಚಿದ್ದಾನೆ ಎಂದು ಮಹಿಳೆ ದೂರಿದ್ದಾರೆ.
ಕಳೆದ 3 ದಿನಗಳಿಂದ ಮನೆಯಲ್ಲಿ ವಾಸಿಸಲು ಹೆದರಿ ಸಿಟಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಜಲಜ ಆಚಾರ್ತಿಯನ್ನು ವಿಶು ಶೆಟ್ಟಿ, ಮಹಿಳಾ ಪೊಲೀಸರ ಸಹಾಯದಿಂದ ರಕ್ಷಿಸಿ ಸಖಿ ಒನ್ ಸ್ಟಾಪ್ ಸೆಂಟರ್ಗೆ ದಾಖಲಿಸಿದ್ದರು. ಈ ವಿಚಾರವನ್ನು ವಿಶು ಶೆಟ್ಟಿ, ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದರು. ಈ ಮೂಲಕ ಈ ಮಹಿಳೆಯರ ಸಂಬಂಧಿಕರ ಪತ್ತೆಯಾಗಿದೆ. ಮಹಿಳೆಯ ಮಗ, ಸಖಿ ಒನ್ ಸ್ಟಾಪ್ ಸೆಂಟರ್ಗೆ ಮಹಿಳಾ ಪೊಲೀಸರ ಮೂಲಕ ಬಂದಿದ್ದು ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.