ಸರಕಾರದಿಂದ ಹಣ ಬಾಕಿ: ಕೆಎಂಸಿಯಲ್ಲಿ ಇಎಸ್ಐ ಸೌಲಭ್ಯ ಸ್ಥಗಿತ
ಉಡುಪಿ, ನ.3: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೌಕರರ ರಾಜ್ಯ ವಿಮಾ ಯೋಜನೆಯ(ಇಎಸ್ಐ) ಜನರಲ್ ಸ್ಪೆಶಾಲಿಟಿ ಕ್ಯಾಶ್ಲೆಸ್ ಸೇವೆ ಯನ್ನು ನ.1ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಎಸ್ಐಯಡಿ ಚಿಕಿತ್ಸೆ ಪಡೆದವರ 10ಕೋ.ರೂ. ಬಿಲ್ನ್ನು ಸರಕಾರ ಪಾವತಿಸದೆ ಬಾಕಿ ಇರಿಸಿರುವ ಹಿನ್ನೆಲೆಯಲ್ಲಿ ಈ ಸೇವೆಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.
ಇಎಸ್ಐ ನಿರ್ದೇಶಾಲಯಕ್ಕೆ ಪತ್ರ: ‘ಕೆಲವು ವರ್ಷಗಳ ಹಿಂದೆ ಮಾಹಿತಿ ಸೇವಾ ಸಮಿತಿ, ಇದೇ ವಿಚಾರವಾಗಿ ಹೋರಾಟ ನಡೆಸಿದಾಗ ಇಎಸ್ಐಯು ಕೆಎಂಸಿಗೆ ಕೋಟ್ಯಂತರ ರೂ. ಹಣ ಪಾವತಿಸಲು ಬಾಕಿ ಇರುವುದಾಗಿ ಹೇಳಿತ್ತು. ಇದೀಗ ಅದೇ ಕಾರಣಕ್ಕೆ ಮತ್ತೆ ಕೆಎಂಸಿ ಈ ಸೇವೆಯನ್ನು ಸ್ಥಗಿತಗೊಳಿಸಿದೆ. ಆದುದರಿಂದ ಸರಕಾರ ಕೂಡಲೇ ಕೆಎಂಸಿಯ ಬಾಕಿ ಹಣವನ್ನು ಪಾವತಿಸಿ ಆ ಸೇವೆಯನ್ನು ಪುನಾರಂಭಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಇಎಸ್ಐ ನಿರ್ದೇಶಾಲಯ ದೆಹಲಿ ಮತ್ತು ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿಗೆ ಪತ್ರ ಬರೆಯಲಾಗಿದೆ ಎಂದು ಸಮಿತಿಯ ಜಿ.ಎ.ಕೋಟೆಯಾರ್ ತಿಳಿಸಿದ್ದಾರೆ.