ಪಳ್ಳಿಯಬ್ಬ ಕೊಲೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ
ಕೊಣಾಜೆ : ಪಾವೂರು ಗ್ರಾಮದ ವೃದ್ಧನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೇರಿದೆ.
ಅ. 29ರಂದು ಪಾವೂರು ಗ್ರಾಮದ ಮಲಾರ್ ಅಕ್ಷರನಗರ ನಿವಾಸಿ ಪಳ್ಳಿಯಬ್ಬ (70) ನಾಪತ್ತೆಯಾಗಿದ್ದರು. ಮೂರು ದಿನಗಳ ಬಳಿಕ ಅವರ ಮೃತದೇಹ ಇರಾ ಪದವು ಕಲ್ಲಿನ ಕ್ವಾರಿ ಬಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಹಣಕಾಸಿನ ವಿಚಾರದಲ್ಲಿ ಇವರನ್ನು ಮಲಾರ್ ನಿಂದ ಅಟೋ ಚಾಲಕ ಅಝರ್ ಕರೆದುಕೊಂಡು ಹೋಗಿದ್ದು, ಕಂಚಿನಡ್ಕದಲ್ಲಿ ಐವರು ಕೊಲೆ ಮಾಡಿ ಮೃತದೇಹವನ್ನು ಹೂತು ಹಾಕಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪಾವೂರು ಗ್ರಾಮದ ಅಕ್ಷರನಗರ ನಿವಾಸಿಗಳಾದ ಹಂಝ (44), ಅಝರುದ್ದೀನ್ (27), ಸಜಿಪನಡು ಗ್ರಾಮದ ಅಮೀರ್ (26), ಅರ್ಫಾಝ್ (20 ) ಎಂಬವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಅಲ್ತಾಫ್ ನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಆರೋಪಿಗಳು ಕೊಲೆಗೆ ಬಳಸಿದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.