‘ಸಾಮಾಜಿಕ ಜವಾಬ್ದಾರಿಗೆ ಮಹತ್ವ ಕಲ್ಪಿಸಿದ್ದೇ ಪ್ರವಾದಿ ಹೆಗ್ಗಳಿಕೆ’
ಮಂಗಳೂರು, ನ.7: ರಾಜ್ಯ ಪೈಝಿ ಉಲಮಾಗಳ ಒಕ್ಕೂಟ ರಾಜ್ಯಾದ್ಯಂತ ಹಮ್ಮಿ ಕೊಂಡಿರುವ ರಬೀಅ್ ಅಭಿಯಾನದ ಭಾಗವಾಗಿ ಇತಿಹಾಸ ಪ್ರಸಿದ್ಧ ಮುಲ್ಕಿ ಜುಮಾ ಮಸೀದಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಎಸ್.ಬಿ. ದಾರಿಮಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಾನವರು ತಮ್ಮ ವೈಯಕ್ತಿಕ ಜವಾಬ್ದಾರಿಯನ್ನು ಯಾರದೇ ಬೋಧನೆಯ ಅಗತ್ಯ ಇಲ್ಲದೆಯೇ ನಿರ್ವಹಿಸುತ್ತಿ ದ್ದಾರೆ. ಆದರೆ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರವಾದಿಯ ಹೆಚ್ವಿನ ಬೋಧನೆಗಳು ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವಂತದ್ದು ಎಂದು ಹೇಳಿದರು.
ಮೌಲಾನ ಚೊಕ್ಕಬೆಟ್ಟು ದಾರಿಮಿ ಮಾತನಾಡಿ, ‘ಜಗತ್ತಿಗೆ ನನ್ನನ್ನು ಅಧ್ಯಾಪಕ ನನ್ನಾಗಿ ಕಳುಹಿಸಲಾಗಿದೆ’ ಎಂದು ಪ್ರವಾದಿ ಹೇಳಿರುತ್ತಾರೆ. ಮಾನವ ಬದುಕನ್ನು ಸರಳವಾಗಿ ಕಲಿಸಿ ಕೊಟ್ಟ ಪ್ರವಾದಿಗಳು, ಸಂಕಷ್ಟದ ಸಮಯ ಸಹಾಯ ಮಾಡುತ್ತಾ, ದ್ವೇಷ ತೋರುವವರೊಂದಿಗೆ ಪ್ರೀತಿ ತೋರುತ್ತಾ, ತಪ್ಪು ಮಾಡಿದವರಿಗೆ ಕ್ಷಮೆ ಕೊಟ್ಟು, ಕೊಲ್ಲಲು ಬಂದವರಿಗೆ ಕರುಣೆಯಿಂದ ವರ್ತಿಸುವ ಮೂಲಕ ಇಸ್ಲಾಮಿನ ಸಂದೇಶಗಳನ್ನು ಜಗದೆಲ್ಲೆಡೆ ಹರಡಿದರು. ಇಂತಹ ಮಾದರಿಯ ಮೂಲಕ ಪ್ರವಾದಿ ಮುಹಮ್ಮದ್ರ ಸಂದೇಶಗಳನ್ನು ಪ್ರಸ್ತುತ ಪಡಿಸುವುದು ಕಾಲದ ಬೇಡಿಕೆ ಎಂದು ಅಭಿಪ್ರಾಯ ಪಟ್ಟರು.
ಪೈಝೀಸ್ ರಾಜ್ಯ ಘಟಕದ ಕೋಶಾಧಿಕಾರಿ ಕನ್ಯಾನ ಸುಲೈಮಾನ್ ಪೈಝಿ ಅಧ್ಯಕ್ಷತೆ ವಹಿಸಿದ್ದರು. ಪಲಿಮಾರ್ ಪೈಝಿ, ಮಜೀದ್ ಪೈಝಿ ನಂದಾವರ, ಶಬೀರ್ ಪೈಝಿ ಎರ್ಮಾಲ್ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಿಯಾಝ್ ಫೈಝಿ, ಶೌಕತ್ ಫೈಝಿ ಕಣಿಯೂರು, ಎ.ಕೆ. ಅಬ್ದುಲ್ ಖಾದರ್ ಹಾಜಿ, ಇಬ್ರಾಹೀಂ ಬೊಳ್ಳೂರು, ಮುಹಮ್ಮದ್ ಹುಸೈನ್ ಮುಲ್ಕಿ, ಶರೀಫ್ ಇಮ್ದಾದಿ, ಶಾಪಿ ಮುಸ್ಲಿಯಾರ್ ಕಾರ್ನಾಡ್ ಅಝೀಝ್ ಚಿಞ ಅಬ್ದುಲ್ ಖಾದರ್ ಇಂದಿರಾನಗರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೈಯ್ಯಿಬ್ ಪೈಝಿ ಬೊಳ್ಳೂರು ಸ್ವಾಗತಿಸಿದರು. ಸಿರಾಜ್ ಪೈಝಿ ಚಾರ್ಮಾಡಿ ವಂದಿಸಿದರು.