ವಿಶ್ವ ಮಧುಮೇಹ ದಿನದ ಸಂಬಂಧ ಮಲ್ಪೆಯಲ್ಲಿ ಮರಳು ಶಿಲ್ಪ
ಮಣಿಪಾಲ, ನ.15: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಅಂತ:ಸ್ರಾವ ಶಾಸ್ತ್ರ (ಎಂಡೋ ಕ್ರೈನೊಲೋಜಿ) ವಿಭಾಗವು ವಿಶ್ವ ಮಧುಮೇಹ ದಿನಾಚರಣೆಯ ಸಂಬಂಧ ನ.14ರಂದು ಮಲ್ಪೆ ಸಮುದ್ರ ಕಿನಾರೆಯಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಮರಳು ಶಿಲ್ಪವನ್ನು ರಚಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿತು.
ಮರಳು ಶಿಲ್ಪವನ್ನು ಅನಾವರಣಗೊಳಿಸಿ ಮಾತನಾಡಿದ ಕೆಎಂಸಿಯ ಡೀನ್ ಡಾ.ಶರತ್ ರಾವ್, ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಮೂರರಲ್ಲಿ ಎರಡರಷ್ಟು ಜನರು ದಕ್ಷಿಣ ಭಾರತದ ರಾಜ್ಯಗಳಲ್ಲಿರುವುದು ಕಳವಳಕಾರಿ ಅಂಶವಾಗಿದೆ ಎಂದರು.
ಈ ವರ್ಷದ ಆಚರಣೆಯ ಧ್ಯೇಯವಾಕ್ಯ ‘ದಾದಿಯರು ಮತ್ತು ಮಧುಮೇಹ’ ಎಂದಾಗಿದ್ದು, ನಿಯಮಿತ ತಪಾಸಣೆ, ಮಾನಸಿಕ ಬೆಂಬಲ, ಸ್ವ ನಿರ್ವಹಣೆ ಮತ್ತು ಆರೋಗ್ಯಕರ ಬದುಕಿನ ಮಾಹಿತಿ ಸೇರಿದಂತೆ ಮಧುಮೇಹ ಇರುವವರಿಗೆ ಆಜೀವ ಆರೈಕೆಯನ್ನು ನೀಡುವಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸೆಲ್ಫಿ ಸ್ಟಾಂಡ್ನ್ನು ಉದ್ಘಾಟಿಸಿ ದರು. ಆಸ್ಪತ್ರೆಯ ಅಂತ:ಸ್ರಾವ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸಹನಾ ಶೆಟ್ಟಿ ಕಾರ್ಯಕ್ರಮ ವನ್ನು ನಿರೂಪಿಸಿದರು.