ಕೆಎಂಸಿಯಲ್ಲಿ ಮಕ್ಕಳಿಗಾಗಿ ವಿಶೇಷ ನೇತ್ರ ಚಿಕಿತ್ಸಾ ವಿಭಾಗ
ಮಣಿಪಾಲ, ನ.15: ಮಕ್ಕಳಿಗಾಗಿ ವಿಶೇಷ ನೇತ್ರ ಚಿಕಿತ್ಸಾ ವಿಭಾಗ ಮತ್ತು ಎಕ್ಸೈಸ್ ಕ್ಲಿನಿಕನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉದ್ಘಾಟಿಸಲಾಯಿತು. ಮಕ್ಕಳ ನೇತ್ರ ಚಿಕಿತ್ಸಾಲಯವನ್ನು ಕೆಎಂಸಿಯ ಡೀನ್ ಡಾ.ಶರತ್ ಕುಮಾರ್ ರಾವ್ ಮತ್ತು ಎಕ್ಸ್ ಪ್ರೆಸ್ ನೇತ್ರ ಚಿಕಿತ್ಸಾಲಯವನ್ನು ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಉದ್ಘಾಟಿಸಿದರು.
ವಿಶೇಷ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಡಾ ಶರತ್ಕುಮಾರ್, ಮಕ್ಕಳ ರೋಗ ಮತ್ತು ರೋಗನಿರ್ಣಯ ವಯಸ್ಕರಿಗಿಂತ ಸಂಪೂರ್ಣ ಭಿನ್ನವಾಗಿದೆ. ಆದ್ದರಿಂದ ಮಕ್ಕಳನ್ನು ಚಿಕಿತ್ಸೆಗಾಗಿ ವಿಭಿನ್ನವಾಗಿ ಪರಿಗಣಿಸುವುದು ಮುಖ್ಯ. ಮಕ್ಕಳ ರೋಗಿಗಳಿಗೆ ವಿಶ್ವಾದ್ಯಂತ ಅನೇಕ ಉಪ ವಿಭಾಗಗಳು ಬರುತ್ತಿವೆ. ಇದು ನೇತ್ರವಿಜ್ಞಾನದಲ್ಲೂ ಇದೆ. ಮಕ್ಕಳ ನೇತ್ರ ಚಿಕಿತ್ಸಾಲಯ ಪ್ರಾರಂಗೊಂಡಿರು ವುದರಿಂದ ಮಕ್ಕಳಿಗೆ ಇದು ಬಹಳಷ್ಟು ಉಪಯುಕ್ತವಾಗಲಿದೆ ಎಂದರು.
ಈ ಸೇವೆ ಪ್ರತೀ ಶನಿವಾರ ಅಪರಾಹ್ನ 1:30ರಿಂದ ಸಂಜೆ 4:30ರವರೆಗೆ ಕಾರ್ಯ ನಿರ್ವಹಿಸಲಿದೆ. ಮಕ್ಕಳಲ್ಲಿ ಕಂಡುಬರುವ ದೃಷ್ಟಿ ದೋಷ, ಕಣ್ಣಿನ ಪೊರೆಯ ತೊಂದರೆ, ಮೆಳ್ಳೆಗಣ್ಣು, ಅಂಬ್ಲ್ಯೋಪಿಯಾ ಮತ್ತು ಇತರ ತೊಂದರೆ ಗಳಿಗೆ ಚಿಕಿತ್ಸೆ ಇಲ್ಲಿ ನೀಡಲಾಗುವುದು. ಅಲ್ಲದೇ ಕರಿಗುಡ್ಡೆ, ಅಕ್ಷಿಪಟಲ ಅಥವಾ ಗ್ಲುಕೋಮಾ ತೊಂದರೆ ಇದ್ದರೆ ಅದಕ್ಕೆ ಸಂಬಂಧ ಪಟ್ಟ ತಜ್ಞರಿಂದ ಚಿಕಿತ್ಸೆ ನೀಡಲಾಗುವುದು ಎಂದರು.
ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಡಾ ಚಿರಂಜೊಯ್ ಮುಖೋಪಾಧ್ಯಾಯ, ಡಾ.ಪದ್ಮರಾಜ್ ಹೆಗ್ಡೆ ಮತ್ತು ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಲತಾ ವಿ ಭಂಡಾರಿ ಉಪಸ್ಥಿತರಿದ್ದರು.